ಹಾಸನ: ನಾನು ಹಾಸನ ಹಾಲು ಒಕ್ಕೂಟದ ಅಧ್ಯಕ್ಷನಾದಾಗ ದಿನಕ್ಕೆ ೭೦ ಸಾವಿರ ಲೀಟರ್ ಇದ್ದ ಹಾಲು ಉತ್ಪಾದನೆ ಈಗ ೧೨.೫ ಲಕ್ಷ ಲೀಟರ್ ಗಡಿ ದಾಟಿದ್ದು ಹಾಲು ಉತ್ಪಾದನೆಯಲ್ಲಿ ಹೊಸ ಕ್ರಾಂತಿ ಆಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ ರೇವಣ್ಣ ತಿಳಿಸಿದರು.
ಒಕ್ಕೂಟದ ಆವರಣದಲ್ಲಿಂದು ಎಸ್ಎಸ್ಎಲ್ಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸೌಲಭ್ಯಗಳ ವಿತರಣೆ ಮತ್ತು ಸಹಕಾರ ಸಂಘಗಳ ಕಾರ್ಯ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಮಕ್ಕಳಿಗೆ ಉತ್ತೇಜನ ನೀಡುವ ಸಲುವಾಗಿ ಒಟ್ಟು ೩೮೦ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ೫ ಸಾವಿರ, ಪಿಯುಸಿ ೭ ಸಾವಿರ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ೧೦ ಸಾವಿರ ಹಣ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲೇ ಪ್ರತಿ ಲೀಟರ್ ಹಾಲಿಗೆ ಅತಿ ಹೆಚ್ಚು ದರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಪ್ರತಿ ಹಳ್ಳಿಗೆ ಡೇರಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸAಸದ ಪ್ರಜ್ವಲ್ ರೇವಣ್ಣ ಮಾತನಾಡಿ, ದೇಶದ ಗಡಿ ಕಾಯುವ ಯೋಧರಿಗೆ ಹಾಸನ ಒಕ್ಕೂಟದಿಂದ ಹಾಲು ಸರಬರಾಜು ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸರಿಯಾದ ಸಮಯಕ್ಕೆ ವಿದ್ಯುತ್ ಹಾಗೂ ಬೆಳೆಗೆ ನೀರು ಹಾಗೂ ಬೆಳೆದ ವೇಳೆಗೆ ಸೂಕ್ತ ಬೆಲೆ ದೊರಕಿಸಿ ಕೊಡುವಂತೆ ರೈತರ ಬೇಡಿಕೆ ಇದೆ ಅದಕ್ಕೆ ಅನುಗುಣವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್ ಬಾಲಕೃಷ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ಒಕ್ಕೂಟದ ನಿರ್ದೇಶಕರು ಹಾಗೂ ಪದಾಧಿಕಾರಿಗಳು,ಹಾಲು ಉತ್ಪಾದಕರು ಇದ್ದರು