ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗಾಗಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತು. ಗ್ಯಾರೆಂಟಿ ಭಾಗ್ಯ ಅನ್ನುತ್ತಿದ್ದರು ಈಗ ಭಾಗ್ಯನೂ ಇಲ್ಲ, ಕಾಮಗಾರಿಗೆ ದುಡ್ಡೂ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದರು.
ನಗರದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ತೆರಿಗೆ ಹಣವೇ ರಾಜ್ಯಕ್ಕೆ ಬರುತ್ತಿಲ್ಲ ಎಂಬ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಈಗ ಪುಸ್ತಕಾನೇ ಓದುತ್ತಿಲ್ಲ. ಅದು ಬಂದಿರೋದು ಗ್ರಹಚಾರ. ಹಿಂದೆ ಇದ್ದ ಸಿದ್ದರಾಮಯ್ಯ ಇವತ್ತಿಲ್ಲ. ಕುರ್ಚಿಗೋಸ್ಕರ ಏನೆಲ್ಲ ಮಾಡ್ತಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತು. ಯಾವುದೇ ಕೆಲಸ ಮಾಡೋದಕ್ಕೆ ಅವರ ಹತ್ತಿರ ಸಂಪತ್ತಿಲ್ಲ. ಆ ಸಂಪನ್ಮೂಲ ಇಲ್ಲದೇ ಇದ್ದಾಗ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ.
ಆದರ ಮೋದಿ ಸರ್ಕಾರ ಹಾಗಿಲ್ಲ, ನಮ್ಮಹತ್ರ ಎಷ್ಟಿದೆ ಅದಕ್ಕೂ ನೂರು ಪಟ್ಟು ಕೆಲಸ ಮಾಡ್ತಾರೆ. ಈಶಾನ್ಯ ರಾಜ್ಯಗಳಿಗೆ ಹೋಗಿ ಬನ್ನಿ ಅಭಿವೃದ್ಧಿ ಗೊತ್ತಾಗುತ್ತದೆ. ಇವರಿಗೆ ಹೇಳ್ದೆ ನಾನು, ‘ನಿಮ್ಮ ಮನೆ ಕಾಯ್ದೋಗ ನೀವು ಮತ್ತು ನಿಮ್ಮ ಅಧಿಕಾರಿಗಳನ್ನ ಒಂದು ವಾರ ಕರ್ಕೊಂಡ್ ಬನ್ನಿ. ಮೋದಿ ಕಚೇರೀಲಿ ಬೇಡ ನನ್ನ ಕಚೇರಿಲಿ ನೋಡಿ ಅಂತಾ… ಆಡಳಿತ ಅಂದ್ರೇನು ಪಾರದರ್ಶಕತೆ ಅಂದ್ರೇನು ನೋಡಿ’.
ಸಾಮಾನ್ಯ ಜನರಿಗೆ ಹೇಗೆ ಸೌಲತ್ತು ನೀಡಬಹುದು ಎಂಬುದನ್ನ ಬಂದು ನೋಡ್ರಿ ಆಮೇಲಾದ್ರು ಒಂದು ಹಂತಕ್ಕೆ ತರೋಣ. ಕೇಂದ್ರ ಮತ್ತು ರಾಜ್ಯ ಒಂದು ನಾಣ್ಯದ ಎರಡು ಮುಖವಾಗಿ ಒಟ್ಟಾಗಿ ಕೆಲಸ ಮಾಡಿದ್ರೆ ಹೇಗೆಲ್ಲಾ ಕೆಲಸ ಆಗುತ್ತೆ ಅನ್ನೋದಕ್ಕೆ ಅನೇಕ ಉದಾಹರಣೆ ಕೊಟ್ಟಿದ್ದೇವೆ. ಅವರು ಸತ್ಯ ಮಾತಾಡಿದ್ರೆ ಸಾಕು ನಾವು ಅಡ್ಜಸ್ಟ್ ಆಗ್ತೀವಪ್ಪ. ಅವರು ಸತ್ಯ ಮಾತಾಡೋಕೆ ತಯಾರಿಲ್ಲ. ಏನೋ ಒಂದು ಹೇಳೋದು, ತಪ್ಪಿಸಿಕೊಳ್ಳೋದು ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಇನ್ನೊಬ್ಬರ ಹೆಗಲಮೇಲೆ ಗನ್ ಇಟ್ಟು ಹೊಡೆಯೋದನ್ನು ಬಿಟ್ಟು ಅವರ ಗನ್ ಪರಿಸ್ಥಿತಿ ಏನಾಗಿದೆ ನೋಡಿಕೊಂಡು ಕೆಲಸ ಮಾಡಿದ್ರೆ ಇನ್ನೂ ಚೆನ್ನಾಗಿ ಕೆಲಸ ಆಗಬಹುದು ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಭವಿಷ್ಯದ ಭಾರತಕ್ಕೆ ಒಂದು ಸಂದೇಶವನ್ನು ಕೊಡುತ್ತಿದ್ದಾರೆ. ಈಗ ಆಗಿರುವ ಕಹಿ ಘಟನೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ರಾಜತಾಂತ್ರಿಕ ತೀರ್ಮಾನವನ್ನ ಇಡೀ ವಿಶ್ವವೇ ಮೆಚ್ಚಿಕೊಳ್ತಿದೆ. ಇಂತಹವರು ನಮ್ಮ ಪ್ರಧಾನಿ ಎಂದು ಹೇಳೋದಕ್ಕೆ ಹೆಮ್ಮೆ ಇದೆ ಎಂದು ಹೇಳಿದರು.
ನಾನು ಕೇಂದ್ರ ಸಚಿವನಾಗಿ ಬಂದ ನಂತರ ಹತ್ತು ತಿಂಗಳಲ್ಲಿ ನಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾಮಗಾರಿಗಳಿಗೂ ಚಾಲನೆ ಸಿಕ್ಕಿದ್ದು, ರಾಜ್ಯ ಸರ್ಕಾರದವರು ನಾವು ಶೇಕಡ ೫೦ ರಷ್ಟು ಪಾಲು ಕೋಡ್ತೀವಿ ಅಂದರು. ಆದ್ರೆ ಕೊಡದೇ ಕಾಮಗಾರಿ ನಿಂತು ಹೋಗಿದ್ದು, ಈಗ ನಾನು ಬಂದ ಮೇಲೆ ನೂರಾರು ಕೆಲಸ ನಡೆಯುತ್ತಿದೆ.
ಇವರು ಈ ಹಿಂದೆ ಆ ರೀತಿ ಬಂದಿದ್ದೇ ಎಡವಟ್ಟಾಗಿರುವುದು. ಹಾಸನ ರೈಲ್ವೆ ಮೇಲ್ಸೇತುವೆಗೆ ರಾಜ್ಯದ ಪಾಲು ಕೊಡ್ತೇವೆ ಅಂದಿದ್ದರು. ಆದರೆ ಇವರ ಹತ್ರ ದುಡ್ಡೇ ಇಲ್ಲ. ನಾನೇ ಜಿಲ್ಲಾ ಮಂತ್ರಿ ರಾಜಣ್ಣನವರಿಗೆ, ಹಾಸನ ಸಂಸದರಿಗೆ ಇಂದು ಪತ್ರ ಬರೆಯೋದಕ್ಕೆ ಸೂಚಿಸಿದ್ದೇನೆ. ಮೊದಲು ಸಮಸ್ಯೆ ಬಗೆಹರಿಯಲಿ ಎಂದರು.
ನರೇಂದ್ರ ಮೋದಿಯವರ ಕಾರ್ಯ ವೈಖರಿಯಲ್ಲಿ ನಾವು ಹೆಂಗಿದ್ದೇವೆ ಅಂದ್ರೆ ನಾನು ೧೦೦ಕಿ.ಮೀ. ಸ್ಪೀಡ್ನಲ್ಲಿ ಓಡ್ತೀನಿ, ಇವರು ೫ಕಿ.ಮೀಗೂ ಬರ್ತಿಲ್ವೇ! ಮಷಿನ್ ಇದ್ರೆ ಪಂಪ್ ಇಲ್ಲ, ಪಂಪ್ ಇದ್ರೆ ಡೀಸೆಲ್ ಇಲ್ಲ ಅನ್ನೋ ಹಾಗೆ ಆಗಿದೆ ರಾಜ್ಯ ಸರ್ಕಾರದ ಪರಿಸ್ಥಿತಿ ಇದೆ ಎಂದು ಲೇವಡಿ ಮಾಡಿದರು.
ಚಿಕ್ಕಮಗಳೂರು-ಹಾಂದಿ- ಬೇಲೂರು ರಸ್ತೆಯ ಕಾಮಗಾರಿಯನ್ನೂ ಪ್ರಾರಂಭ ಮಾಡುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ಶೋಭನ್ ಬಾಬು, ಹೆಚ್.ಎನ್. ನಾಗೇಶ್, ಚನ್ನಕೇಶವ, ಕಟ್ಟಾಯ ಶಿಕುಮಾರ್, ಮಯೂರಿ, ನಾಗೇಶ್ ಇತರರಿದ್ದರು.