ಹಾಸನ: ಸಿದ್ದರಾಮಯ್ಯ ಮುಖದಲ್ಲಿ ಪಾಪಪ್ರಜ್ಞೆ ಯಾವ ರೀತಿ ಕಾಡ್ತುತ್ತಾ ಇದೆ ಎನ್ನುವುದು ಅವರು ಮಾಧ್ಯಮದ ಮುಂದೆ ಕುಳಿತಾಗ ಗೊತ್ತಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಡಾ ನಿವೇಶನ ಹಂಚಿಕೆ ವಿವಾದ ಮುಂದಿಟ್ಟು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ನಿಮ್ಮ ಉತ್ತರ ಇದೆಯಲ್ಲಾ, ಹಿಂದೆ ಯಾವ ರೀತಿ ಉತ್ತರ ಕೊಡುತ್ತಿದ್ದಿರಿ? ಮೊನ್ನೆ ಯಾವ ರೀತಿ ನಡೆದುಕೊಂಡಿರಿ? ಈ ಸರ್ಕಾರದ ಪಾಪದ ಕೊಡ ತುಂಬಿ ಹೋಗಿದೆ ಎಂದು ಕಿರಿಕಾಡಿದರು.
ಕಳೆದ ಒಂದು ಕಾಲ ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ. 2010, 2011 ಇಸವಿಯದ್ದು ಈಗ ಮಾತನಾಡುತ್ತಿದ್ದೀರಿ, ಅವತ್ತು ನಿಮ್ಮ ಗಮನಕ್ಕೆ ಬಂದಿರಲಿಲ್ಲವಾ? ನೀವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಈಗ ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಯಾವ ತನಿಖೆ ನಡೆಸಿ ಯಾರ ಮೇಲೆ ಕ್ರಮ ತಗೋತಿರಿ? ಜನರು ನನಗೆ ಸ್ವತಂತ್ರವಾದ ಸರ್ಕಾರ ಕೊಡಲಿಲ್ಲ. ಹೀಗಾಗಿ ನನಗೆ ಕೆಲವು ವರದಿಗಳನ್ನು ಕೊಡಲು ಆಗಲಿಲ್ಲ.
ಮೈಸೂರು ಮುಡಾದಲ್ಲಿ ಅಷ್ಟೆಲ್ಲಾ ತಪ್ಪು ಮಾಡಿ ನನ್ನ ಬಾಮೈದ ತಪ್ಪು ಮಾಡಿದ್ದಾನೆ ಅಂತ ಅವರ ಮೇಲೆ ಹೇಳುತ್ತಿದ್ದಾರೆ. ಆ ಭೂಮಿ ನಿಮ್ಮ ಬಾಮೈದ ತೆಗೆದುಕೊಳ್ಳಲು ಅವಕಾಶ ಇತ್ತಾ? ಅದು ದಲಿತರಿಗೆ ಸೇರಿದ ಭೂಮಿ ಸಿದ್ದರಾಮಯ್ಯ ಅವರೇ, ನಿಮ್ಮ ಮುಡಾದಲ್ಲಿ ಯಾರೋದ್ದೋ ಜಮೀನು, 62 ಕೋಟಿ ರೂ. ಕೊಟ್ಟರೆ ಪುಕ್ಸಟ್ಟೆ ಬಿಟ್ಟುಕೊಡ್ತೀರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
1992 ರಲ್ಲಿ ಫೈನಲ್ ನೋಟಿಫಿಕೇಷನ್ ಆಗಿದೆ. 1998 ರಲ್ಲಿ ಭೂ ಮಾಲೀಕರು ಬದುಕೇ ಇಲ್ಲ. ಹೀಗಿರುವಾಗ ಡಿನೋಟಿಫೀಕನ್ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು? ಮೂಲ ಮಾಲೀಕ ನಿಂಗ ತೀರಿಕೊಂಡಿದ್ದು ಯಾವಾಗ? ಡಿನೋಟಿಫಿಕೇಷನ್ ಮಾಡಿ ಸ್ವರ್ಗದಿಂದ ಅರ್ಜಿ ಕೊಟ್ಟಿದ್ರಾ? ಆ ಜಮೀನನ್ನು ನಿಮ್ಮ ಬಾಮೈದ ಖರೀದಿ ಮಾಡಿ ದಾನ ಕೊಟ್ಟು, ಏನು ಡ್ರಾಮಾ? ಎಂದು ವ್ಯಂಗ್ಯವಾಡಿದರು.
ನನ್ನದು ಸೈಟ್ ಇದೆ ಅಂತಾ ಚರ್ಚೆ ಆಗಿದೆ. ನೂರಾರು ಬಾರಿ ಹೇಳಿದ್ದೇನೆ ನನ್ನದು ತೆರೆದ ಪುಸ್ತಕ ಅಂತ.
ನನಗೆ 1985 ರಲ್ಲಿ 21 ಸಾವಿರ ಸ್ಚ್ಕೇರ್ಫೀಟ್ ಇಂಡಸ್ಟ್ರಿಯಲ್ ಲೇಔಟ್ ಅಲಾಟ್ ಮಾಡಿದ್ರು. ನಲವತ್ತು ವರ್ಷದ ಆಗಿದೆ. ಈಗ ತೆಗಿತಿದ್ದೀರಿ ಅಲ್ವಾ, ತೆಗಿರಿ. ನನಗೆ ಅಲಾಟ್ಮೆಂಟ್ ಆಗಿದ್ದಕ್ಕೆ ದುಡ್ಡು ಕಟ್ಟಿದ್ದೀನಿ.
ನನಗೆ ಅಲಾಟ್ ಆಗಿರುವ ಜಾಗದಲ್ಲಿ ಯಾವಾನೋ ಬಿಲ್ಡಿಂಗ್ ಕಟ್ಟಿಕೊಂಡಿದ್ದಾನೆ. ಆ ಬಿಲ್ಡಿಂಗ್ ಕಟ್ಟಿರುವುದಕ್ಕೆ ಮತ್ತೆ ಅರ್ಜಿ ಹಾಕುವುದು ಬೇಡ ಅಂದುಕೊಂಡಿದ್ದೆ. ಆದರೆ ನನ್ನ ಸ್ನೇಹಿತರು ನನ್ನ ಗಮನಕ್ಕೆ ಬಾರದೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಕಮ್ಯೂನಿಕೇಷನ್ ನನಗೆ ಬಂದಿಲ್ಲ.
ಮುಖ್ಯಮಂತ್ರಿಗಳೇ ದಯಮಾಡಿ ಹೇಳ್ತಿನಿ. ಯಾವ್ಯಾವ ಮಂತ್ರಿಗಳು ಹೇಳಿಕೆ ಕೊಡ್ತಿದ್ದಾರೆ ಜನರ ಮುಂದೆ ಇಟ್ಟುಬಿಡಿ. ವಿಷಯ ತಿಳಿದಕೊಂಡು, ದಾಖಲೆ ಹಿಡಿದುಕೊಂಡು ಮಾತಾಡಬೇಕು. ಮುಡಾದ್ದು ದಾಖಲೆ ಸಮೇತ ಮಾತನಾಡುತ್ತಿದ್ದೇವೆ. ನಾಚಿಕೆ ಆಗಲ್ವಾ ಸಿದ್ದರಾಮಯ್ಯ ಅವರೇ ಎಂದು ಕಿಡಿಕಾರಿದರು.