ಚನ್ನರಾಯಪಟ್ಟಣ, ಫೆಬ್ರವರಿ 16: ತಾಲ್ಲೂಕಿನ ಉದಯಪುರ ಗ್ರಾಮದಲ್ಲಿ ತಡರಾತ್ರಿ ಆಘಾತಕಾರಿ ಕಳ್ಳತನ ನಡೆದಿದೆ. ಅಪರಿಚಿತ ಕಳ್ಳರು ಇಂಡಿಯ ಒನ್ ಎಟಿಎಂ ಮಷೀನ್ನನ್ನೇ ಹಣದ ಸಮೇತ ಕದ್ದೊಯ್ದಿದ್ದಾರೆ.
ಈ ಎಟಿಎಂ ಕೇಂದ್ರವು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇದ್ದರೂ, ಕಳ್ಳರು ಎಟಿಎಂ ಅನ್ನು ಸ್ಥಳದಿಂದ ಎಳೆದು ಕೊಂಡೊಯ್ದಿದ್ದಾರೆ. ಎಟಿಎಂನಲ್ಲಿದ್ದ ಲಕ್ಷಾಂತರ ರೂ. ನಗದು ಸಹಿತ ಮಷೀನ್ ಕಳುವಾದ ಸುದ್ದಿ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಶ್ವಾನದಳ, ಬೆರಳಚ್ಚು ತಜ್ಞರು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹದಿನೈದು ದಿನಗಳೊಳಗೆ ಎರಡನೇ ಎಟಿಎಂ ಕಳ್ಳತನ!
ಹಾಸನದಲ್ಲಿ ಇದೇ ಮಾದರಿಯ ಕಳ್ಳತನ ಈಗಾಗಲೇ ಜನವರಿ 29ರಂದು ನಡೆದಿದೆ. ಹನುಮಂತಪುರದಲ್ಲಿ ಇಂಡಿಯಾ ಒನ್ ಎಟಿಎಂ ಕಳವಾದರೂ, ಇದುವರೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಕಳ್ಳತನ ನಡೆದಿರುವುದು ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.