ಜಮ್ಮು-ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳಿಗೆ ಗಡ್ಡಬೋಳಿಸಲು ಹೊಳೆನರಸೀಪುರ ನರ್ಸಿಂಗ್ ಕಾಲೇಜು ಪ್ರಾಂಶುಪಾಲರ ತಾಕೀತು; ದೇಶದ ಗಮನ ಸೆಳೆದ ಪ್ರಕರಣ ತಣ್ಣಗಾಗಿಸುವಷ್ಟರಲ್ಲಿ ಕಾಲೇಜು ಸುಸ್ತು!

ಹಾಸನ : ಜಮ್ಮು-ಕಾಶ್ಮೀರ‌ ಮೂಲದ ಮುಸ್ಲಿಂ ಸಮುದಾಯದ  ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಡ್ಡ ಬೋಳಿಸುವಂತೆ ಹೊಳೆನರಸೀಪುರ ಕಾಲೇಜು ಪ್ರಾಂಶುಪಾಲರು ತಾಕೀತು‌ ಮಾಡಿದ್ದಾರೆ ಎಂದು ದೂರಿ ವಿದ್ಯಾರ್ಥಿಗಳು ಮಾಡಿದ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದ್ದು, ಕಾಲೇಜು ಮುಖ್ಯಸ್ಥರು-ವಿದ್ಯಾರ್ಥಿಗಳ ನಡುವಿನ ಮಾತುಕತೆ ನಂತರ ವಿವಾದ ತಿಳಿಯಾಗಿದೆ.

ಪಿಎಂಎಸ್‌ಎಸ್ ಯೋಜನೆಯಡಿ ಜಮ್ಮು ಕಾಶ್ಮೀರದಿಂದ ಹೊಳೆನರಸೀಪುರಕ್ಕೆ ವ್ಯಾಸಂಗಕ್ಕಾಗಿ ಬಂದಿರುವ ಯುವಕರು ನಿನ್ನೆ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಗೆ ಪತ್ರ ಬರೆದು ತಮಗೆ ಗಡ್ಡಬೋಳಿಸಲು ಪ್ರಾಂಶುಪಾಲರು ಸೂಚಿಸಿದ್ದಾರೆ ಎಂದು ದೂರಿದ್ದರು. ಪತ್ರದ ಪ್ರತಿಯನ್ನು ಟ್ವೀಟ್ ಕೂಡ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು.

ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಸಿಎಂಗೆ ಬರೆದ ಪತ್ರ

ನಮ್ಮ ಗಡ್ಡ ಬೋಳಿಸಿಕೊಂಡು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಈ ಕ್ರಮ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು 20 ವಿದ್ಯಾರ್ಥಿಗಳು ದೂರಿದ್ದರು.

ಈ ಸಂಬಂಧ ಜಮ್ಮು-ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೂಡಲೇ ಮಧ್ಯಪ್ರವೇಶಿಸುವಂತೆ ಆಗ್ರಹಿಸಿತ್ತು. ಈ ಸಂಬಂಧ ಸಿಎಂ ಕಚೇರಿ ಕೂಡ ಕಾಲೇಜಿನಿಂದ ಮಾಹಿತಿ ನೀಡಲು ಸೂಚಿಸಿತ್ತು.

ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಪ್ರಾಂಶುಪಾಲ ಚಂದ್ರಶೇಖರ್, ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡುತ್ತಿರಲಿಲ್ಲ. ಹೀಗಾಗಿ ಕಾಲೇಜಿನ ಶಿಸ್ತು ನಿಯಮ ಪಾಲಿಸಲು ಹೇಳಿದ್ದೆವು ಎಂದು ಸ್ಪಷ್ಟನೆ ನೀಡಿದರು.

ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ನಾವೂ ಎಲ್ಲ ವಿದ್ಯಾರ್ಥಿಗಳಂತೆ ಶಿಸ್ತು ಪಾಲನೆ ಮಾಡುತ್ತಿದ್ದೇವೆ. ಸ್ವಚ್ಛ ಬಟ್ಟೆಗಳನ್ನೇ ಧರಿಸುತ್ತೇವೆ. ನಮ್ಮ ಕೊಠಡಿಗಳನ್ನು ಬೇಕಾದರೆ ಪರಿಶೀಲಿಸಲಿ ಎಂದು ತಿರುಗೇಟು ‌ನೀಡಿದರು.

ನಂತರ ಕಾಲೇಜಿನ ಪ್ರಮುಖರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಅದರ ಫಲವಾಗಿ ಸಮಾಧಾನಗೊಂಡ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು ನರ್ಸಿಂಗ್ ಕಾಲೇಜು ನಿಯಮಾವಳಿಯಂತೆ ಶಿಸ್ತಿನಿಂದ ಇರಬೇಕು ಎಂದು ಹೇಳಿದ್ದರು. ಅವರು ನೀಡಿದ ಸೂಚನೆ ಸೂಕ್ಷ್ಮವಾದ ವಿಚಾರವಾಗಿತ್ತು.ಇದನ್ನು ದೊಡ್ಡ ವಿಷಯ ಮಾಡುವುದು ಬೇಡ, ಮುಂದೆ ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದಿಲ್ಲ. ಇಲ್ಲಿ ನೀವು ಸುರಕ್ಷಿತವಾಗಿದ್ದೀರಿ ಎಂದು ಪ್ರಾಂಶುಪಾಲರು ಅಭಯ ನೀಡಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡುವ ಮೂಲಕ ವಿವಾದ ಇತ್ಯರ್ಥಗೊಂಡಿತು.