ಹಾಸನ, ಮೇ 02: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಕಾರಣದಿಂದ ಮನನೊಂದು, ಅರಕಲಗೂಡು ತಾಲ್ಲೂಕಿನ ಹಳ್ಳಿಮೈಸೂರು ಗ್ರಾಮದ ವಿದ್ಯಾರ್ಥಿ ಪಲಕೊಡು ಶ್ರೀಧರ್ ರೆಡ್ಡಿ (15) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಇಂದು ನಡೆದಿದೆ.
ಆಂಧ್ರಪ್ರದೇಶ ಮೂಲದ ಗುತ್ತಿಗೆದಾರ ವೆಂಕಟರಮಣರೆಡ್ಡಿಯವರ ಪುತ್ರನಾದ ಶ್ರೀಧರ್ ರೆಡ್ಡಿ, ಕೆಲಸದ ನಿಮಿತ್ತ ಹಳ್ಳಿಮೈಸೂರಿನಲ್ಲಿ ವಾಸವಾಗಿದ್ದ ಕುಟುಂಬದ ಸದಸ್ಯ.
ಇವರು ಹಳ್ಳಿಮೈಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶ್ರೀಧರ್ ತನ್ನ ಅಜ್ಜಿಯ ಮನೆಗೆ ತೆರಳಿದ್ದರು. ಇಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಆಘಾತ ಮೂಡಿಸಿದ್ದು, ಶಿಕ್ಷಣ ವ್ಯವಸ್ಥೆಯ ಒತ್ತಡ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.