ಡಾ.ಸೂರಜ್ ರೇವಣ್ಣ ಆಪ್ತ, ಲೈಂಗಿಕ ದೌರ್ಜನ್ಯ ಪ್ರಕರಣದ A2 ಶಿವಕುಮಾರ್ ನಾಪತ್ತೆ

ಲೈಂಗಿಕ ದೌರ್ಜನ್ಯ ನಡೆದ ನಂತರ ಲಾಡ್ಜ್ ನಲ್ಲಿ ಕೂಡಿ ಹಾಕಿದ್ದ| ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿರುವ ಸಂತ್ರಸ್ತ

ಹಾಸನ: ಡಾ.ಸೂರಜ್‌ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಎರಡನೇ ಆರೋಪಿ, ಎಂಎಲ್ಸಿ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಸಂತ್ರಸ್ತ ಯುವಕ ಸೂರಜ್ ರೇವಣ್ಣ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ ಶಿವಕುಮಾರ್, ಸಂತ್ರಸ್ತ ದಾಖಲಿಸಿದ ದೂರಿನನ್ವಯ ಸೂರಜ್ ರೇವಣ್ಣ ಬಂಧಿತನಾಗುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.

ಹೊಳೆನರಸೀಪುರ ತಾಲ್ಲೂಕಿನ, ಹನುಮನಹಳ್ಳಿ ಗ್ರಾಮದ ಶಿವಕುಮಾರ್, ಸೂರಜ್ ರೇವಣ್ಣ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದರಿಂದ ಆತ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ.

ನನ್ನ ಮೇಲೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ. ನನಗೆ ದೈಹಿಕ ಹಿಂಸೆ ಆಗಿದ್ದರೂ ಆತ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ. ಅವರ ಫೋನ್‌ನಿಂದ ಸೂರಜ್‌ರೇವಣ್ಣ ಜತೆ ಮಾತನಾಡಿಸಿದರು.