Video:ಆಪರೇಷನ್ ಸಿಂಗಕ್ ಕೋರೆ: ಪುಂಡಾನೆ ಸೆರೆಗೆ ಹೊರಟ ಕರ್ನಾಟಕ ಭೀಮನ ತಂಡ

ಹಾಸನ: ಜಿಲ್ಲೆಯಲ್ಲಿ  ಕಳೆದ ನಾಲ್ಕು ತಿಂಗಳಲ್ಲಿ ಐವರು ಜನರು ದಾಳಿಯಿಂದ ಸಾವನ್ನಪ್ಪಿರುವ ಘಟನೆಯ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಇಂದಿನಿಂದ ನರಹಂತಕ ಪುಂಡಾನೆಗಳ ಸೆರೆ ಕಾರ್ಯಾಚರಣೆಯನ್ನು ಆರಂಭಿಸಿದೆ.

ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಮಾಗಡಿ ಎಸ್ಟೇಟ್‌ನಲ್ಲಿ ಕಾರ್ಯಾಚರಣೆ ಆರಂಭವಾಗಿದ್ದು, ನಿನ್ನೆಯೇ ವಡೂರು ತಾತ್ಕಾಲಿಕ ಕ್ಯಾಂಪ್‌ಗೆ ಆಗಮಿಸಿದ ಆರು ಸಾಕಾನೆಗಳಾದ ಕಂಜನ್, ಸುಗ್ರೀವ, ಧನಂಜಯ, ಮಹೇಂದ್ರ, ಏಕಲವ್ಯ ಮತ್ತು ಕರ್ನಾಟಕ ಭೀಮ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ.

ಇಂದು ಸಿಂಗಕ್ ಕೋರೆ ಎಂಬ ಕಾಡಾನೆಯನ್ನು ಸೆರೆಹಿಡಿಯಲು ತಂಡ ಕಾರ್ಯೋನ್ಮುಖವಾಗಿದೆ. ಅರಣ್ಯ ಇಲಾಖೆಯ ಯೋಜನೆಯಂತೆ, ಮೂರರಿಂದ ನಾಲ್ಕು ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗುವುದು. ಸ್ಥಳೀಯರಲ್ಲಿ ಉಂಟಾಗಿರುವ ಭಯ ಮತ್ತು ಆತಂಕವನ್ನು ನಿವಾರಿಸುವ ಗುರಿಯನ್ನು ಕಾರ್ಯಾಚರಣೆ ಹೊಂದಿದೆ.