ಹಾಸನ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದು, ಜಾಮೀನು ಪಡೆದು ಕರ್ತವ್ಯಕ್ಕೆ ಹಾಜರಾದ ಡಿಡಿಪಿಐ, ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಮ್ಮ ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಬೆಳಗ್ಗೆ ಸಸ್ಪೆಂಡ್ ಮಾಡಿ ಸಂಜೆ ತಾವೇ ಅಮಾನತುಗೊಂಡಿದ್ದಾರೆ!

ಹಾಸನ ಡಿಡಿಪಿಐ ಎಚ್.ಕೆ. ಪಾಂಡು, ಲಂಚ ಸ್ವೀಕರಿಸುವಾಗ ಅವರೊಂದಿಗೆ ಸಿಕ್ಕಿಬಿದ್ದಿದ್ದ ಕಚೇರಿ ಅಧೀಕ್ಷಕ ವೇಣುಗೋಪಾಲ್ ರಾವ್ ಅವರು ನಿನ್ನೆ ಸಂಜೆ ಅಮಾನತುಗೊಂಡಿದ್ದು, ಬೆಳಗ್ಗೆಯಷ್ಟೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ಅವರು ಅರಕಲಗೂಡು ಖಾಸಗಿ ಶಾಲೆ ಮಾಲೀಕರಿಂದ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಎದುರಿಸುತ್ತಿದ್ದ FDA ಬಿ.ಎಚ್. ಮಂಜುನಾಥ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದರು.
ಶಿಕ್ಷಕಿ ವರ್ಗಾವಣೆಗಾಗಿ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಜ. 4ರಂದು ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಡಿಡಿಪಿಐ ಹಾಗೂ ಕಚೇರಿ ಅಧೀಕ್ಷಕನನ್ನು ಬಂಧಿಸಿದ್ದರು

ಜಾಮೀನಿನ ಮೇಲೆ ಬಿಡುಗಡೆಯಾಗಿ ಗುರುವಾರ ಕರ್ತವ್ಯಕ್ಕೆ ಹಾಜರಾಗಿದ್ದ ದಿನವೇ ಹೆಚ್.ಕೆ.ಪಾಂಡು ಹಾಗು ವೇಣುಗೋಪಾಲರಾವ್ ಅಮಾನತುಗೊಂಡಿದ್ದಾರೆ.
ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲನವಿ) ನಿಯಮಗಳು, 1957ರ ನಿಯಮ 10 (ಎ), (ಡಿ) ಮತ್ತು 2(ಎ) ಅನ್ವಯ ಅಮಾನತುಗೊಳಿಸಿ ಆದೇಶಿಸಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.