ಹಾಸನ: ಮೂಡಲಹಿಪ್ಪೆಯಲ್ಲಿ ನಿನ್ನೆ ರಾತ್ರಿ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮತ್ತೆ ನಿಮ್ಮ ಸೂರಜ್ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ತಾನೆ ಎಂದು ಬೆಂಬಲಿಗರಿಗೆ ಆಶ್ವಾಸನೆ ನೀಡಿದ್ದಾರೆ.
ಸೂರ್ಯ ಹುಟ್ಟುವುದು ಒಂದೇ ಅಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ. ನಿಮ್ಮ ಪ್ರಜ್ವಲ್ ಅಣ್ಣನೂ ಅಷ್ಟೇ, ನಿಮ್ಮ ಸೂರಜ್ ಅಣ್ಣನೂ ಅಷ್ಟೇ, ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತಿವಿ ಎಂದರು.
ಕೆಲವು ಅಧಿಕಾರಿಗಳು, ಕೆಲವು ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡ್ತಿದ್ದಾರೆ ನೋಡ್ತಾ ಇದ್ದೀವಿ. ಯಾವುದು ಶಾಶ್ವತವಲ್ಲ, ಯಾವ ಸರ್ಕಾರವೂ ಶಾಶ್ವತ ಅಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂತವರು ಏನೇನ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.
ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತೆ. ಈ ದ್ವೇಷದ ರಾಜಕಾರಣ ಉಳಿಯಲ್ಲ. ನಿಮಗೆ 135 ಸೀಟ್ ಕೊಟ್ಟಿರೋದು ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಅಂತ. ಅದನ್ನು ಬಿಟ್ಟು ದಿನ ಬೆಳಿಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಗ್ಸೋದು ಬರಿ ಇದೆ ಆಗೋಯ್ತು ಎಂದು ಕಿರಿಕಾರಿದರು.
ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು?, ಯಾವ ರೈತರಿಗೆ ಒಳ್ಳೆಯದಾಗಿದೆ? ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ. ಮತ್ತೆ ನಿಮ್ಮ ಸೂರಜ್ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ.
ಈ ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕುಣಿಯುತ್ತಿದ್ದಾರೆ ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತೆ ಎಂದು ಎಚ್ಚರಿಸಿದರು.