ಹಾಸನ, ಫೆಬ್ರವರಿ 2: ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿದರು.
“ನಮ್ಮ ಪಕ್ಷದಲ್ಲಿ ಏನಾಗಿದೆ?”
“ನಾನು ಅವರನ್ನು ಹದಿನೈದು ವರ್ಷಗಳಿಂದ ನೋಡುತ್ತಿದ್ದೇನೆ. ಅವರು ಹೊಗಳೋದು ಎಷ್ಟೊತ್ತು? ಬೈಯ್ಯೋದು ಎಷ್ಟೊತ್ತು? ಇದರಲ್ಲಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
“ಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, ಆದರೆ ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ಪರ್ಸನಲ್ ಅಜೆಂಡಾ ಇರಬಹುದು,” ಎಂದೂ ಹೇಳಿದರು.
“ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಗೊಂದಲಗಳಿಲ್ಲ,” ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.
ಬಿಜೆಪಿಯ ಬಣ ರಾಜಕೀಯ:
“ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ನೀಡುವುದು ತಪ್ಪು. ಬಿಜೆಪಿ ಹೈಕಮಾಂಡ್ ಇದೆ, ಅವರು ಸರಿಪಡಿಸಿಕೊಳ್ಳುತ್ತಾರೆ,” ಎಂದು ಬಿಜೆಪಿ ಒಳಜಗಳದ ಬಗ್ಗೆ ಮಾತನಾಡಲು ನಿರಾಕರಿಸಿದರು.
ಸಿಎಂ ಬದಲಾವಣೆ ಕುರಿತು:
“ಅದು ನನಗೆ ಸಂಬಂಧವಿಲ್ಲ. ಅದು ಸಂಪೂರ್ಣವಾಗಿ ಕಾಂಗ್ರೆಸ್ನವರು ತೀರ್ಮಾನಿಸಬೇಕಾದ ವಿಷಯ,” ಎಂದರು.
ಹಾಸನ ಜಿಲ್ಲೆಯ ಬಜೆಟ್ ನಿರೀಕ್ಷೆಗಳು:
“ಬಜೆಟ್ನಲ್ಲಿ ಯೋಜನೆ, ಅನುದಾನ ಬರದೇ ಇರಬಹುದು. ಆದರೆ ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗ ರಾಜ್ಯ ಸರ್ಕಾರ ಸ್ಪಂದಿಸಬೇಕು,” ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ವಿಮಾನ ನಿಲ್ದಾಣ – ದೇವೇಗೌಡರ ಕನಸು:
“ಈ ಯೋಜನೆ ಹಾಸನದ ಜನರ ಓಡಾಟಕ್ಕಾಗಿ ಅಲ್ಲ, ರೈತರ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ಏರ್ ಕಾರ್ಗೋ ಮೂಲಕ ರಫ್ತು ಮಾಡಿ, ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಲು ಯೋಜಿಸಲಾಗಿದೆ. ಇದು ದೇವೇಗೌಡರ ಕನಸು,” ಎಂದರು.
“ಇಪ್ಪತ್ತೈದು ವರ್ಷಗಳಿಂದ ದೇವೇಗೌಡರಿಗೆ ಇದೇ ಚಿಂತೆ. ಆದರೆ ಇದನ್ನು ನಿಭಾಯಿಸಲು ರಾಜ್ಯ ಸರ್ಕಾರ ಎಷ್ಟು ಬೆಂಬಲ ನೀಡುತ್ತಿದೆ ಎಂಬುದು ಮುಖ್ಯ,” ಎಂದು ಅವರು ಹೇಳಿದರು.
ಹಾಸನದಲ್ಲಿ ಹೋರಾಟ ಮಾಡುತ್ತೇನೆ ಎಂಬ ಎಚ್.ಡಿ. ದೇವೇಗೌಡರ ಹೇಳಿಕೆ:
“ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕೆಂಬ ಅವರ ದೃಷ್ಟಿಯಿದೆ. ಪ್ರಧಾನಮಂತ್ರಿಗಳು ನನಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಪಕ್ಷ ಸಂಘಟನೆಗೆ ವಯಸ್ಸಿನ ಸಮಸ್ಯೆ ಇದ್ದರೂ, ದೇವೇಗೌಡರು ಕಾರ್ಯಕರ್ತರಿಗೆ ಶಕ್ತಿ ತುಂಬಲು ಹೋರಾಟ ಮಾಡುತ್ತಿದ್ದಾರೆ,” ಎಂದು ಕುಮಾರಸ್ವಾಮಿ ಹೇಳಿದರು.
“ನನಗೆ ಬೇರೆ ಬೇರೆ ರೀತಿಯ ಒತ್ತಡಗಳಿವೆ. ಆದರೆ ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ದೇವೇಗೌಡರು ಇನ್ನೂ ನಮ್ಮ ಮುಂದಿರಬೇಕು. ಅವರ ಕನಸು ಈ ನಾಡಿನ ಜನರ ಸಹಕಾರದಿಂದ ನನಸಾಗುವುದು,” ಎಂದರು.
ರಾಜ್ಯದ ಅಭಿವೃದ್ಧಿ ಮತ್ತು ತಂತ್ರಜ್ಞಾನ:
“ಈ ರಾಜ್ಯದ ಅಭಿವೃದ್ಧಿಗೆ ದೇವೇಗೌಡರು ಮಾಡಲಾಗದ ಕೆಲಸಗಳನ್ನು ನಾನು ಮಾಡಲು ಯೋಜನೆ ಹೊಂದಿದ್ದೇನೆ. ಅವರ ಮಾರ್ಗದರ್ಶನದೊಂದಿಗೆ, ಯೋಜನೆಗಳನ್ನು ಜಾರಿಗೆ ತರಲು ನಾನು ಯತ್ನಿಸುತ್ತಿದ್ದೇನೆ,” ಎಂದರು.
“ಸಾಫ್ಟ್ವೇರ್ ಇಂಡಸ್ಟ್ರಿಗೆ ಕರ್ನಾಟಕ ಹಬ್ ಆಗಿದೆ. ಇದೇ ರೀತಿ ಆರ್ಟಿಫಿಷಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲೂ ಉತ್ತೇಜನ ನೀಡಲು ಪ್ರಯತ್ನಿಸುತ್ತಿದ್ದೇನೆ,” ಎಂದು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಹಂಚಿಕೊಂಡರು.