ಸಿಎಂ ವಿರುದ್ಧ ಹೋರಾಡುತ್ತಿರುವುದರಿಂದಲೇ ನನ್ನ ಮೇಲೆ ವಾಮಾಚಾರ; ಸ್ನೇಹಮಯಿ ಕೃಷ್ಣ ಆರೋಪ

ಹಾಸನ, ಫೆಬ್ರವರಿ 1: ಮುಡಾ ಹಗರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ನಾನು ಹೋರಾಟ ಮಾಡುತ್ತಿರುವುದರಿಂದ ನನ್ನ ವಿರುದ್ಧ ಮಂಗಳೂರಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. 

“ನಾನು ಮುಖ್ಯಮಂತ್ರಿ ವಿರುದ್ಧ ಮುಡಾ ಹಗರಣದಲ್ಲಿ ಹೋರಾಟ ಮಾಡುತ್ತಿದ್ದೇನೆ. ನನಗೆ ಭೀತಿಯಿಲ್ಲ. ನನ್ನ ಹೋರಾಟವನ್ನು ಹತ್ತಿಕ್ಕಲು ಆಗುವುದಿಲ್ಲ” ಎಂದು ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರಿಗೆ ಹೇಳಿದರು.

ಸಿಎಂ ಹಾಗೂ ಅವರ ಪತ್ನಿ ತಪ್ಪಿತಸ್ಥರು – ಸ್ನೇಹಮಯಿ ಕೃಷ್ಣ

ಮುಡಾ ಹಗರಣದ ಬಗ್ಗೆ ಗಂಭೀರ ಆರೋಪ ಮಾಡಿರುವ ಅವರು, ಮುಖ್ಯಮಂತ್ರಿ ಹಾಗೂ ಅವರ ಪತ್ನಿ ಈ ಹಗರಣದಲ್ಲಿ ಪಾತ್ರವಹಿಸಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು ಎಂದರು.

“2004-2005 ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಪ್ರಸಾದ್ ಅತ್ತಾವರ ಅವರಿಂದ ಅನುಕೂಲ ಪಡೆದಿದ್ದಾರೆ. ಈಗ ನಾನು ಹಗರಣವನ್ನು ಬಹಿರಂಗಪಡಿಸುತ್ತಿದ್ದರಿಂದ ನನ್ನ ವಿರುದ್ಧ ದುರುದ್ದೇಶದಿಂದ ವಾಮಾಚಾರ ಮಾಡಲಾಗಿದೆ” ಎಂದು ಆರೋಪಿಸಿದರು.

 ಹಗರಣ ಮುಚ್ಚಿಹಾಕಲು ಕೆಲವು ಆಮಿಷ ಒಡ್ಡುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾನು ಜಗ್ಗುವುದಿಲ್ಲ.ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಮುಡಾ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು” ಎಂದು ಅವರು ಆಗ್ರಹಿಸಿದರು.