ಬೇಲೂರು: ಪಹಲ್ಗಾಮ್ ಭಯೋತ್ಪಾದನೆ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಿ ವಿ.ಎಚ್.ಪಿ. ಪ್ರತಿಭಟನೆ

ಹಾಸನ, ಏಪ್ರಿಲ್ 24, 2025: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು  ನಡೆಸಿದ ನರಮೇಧವನ್ನು ಖಂಡಿಸಿ, ಬೇಲೂರಿನಲ್ಲಿ ವಿಶ್ವ ಹಿಂದೂ ಪರಿಷತ್ (ವಿಹಿಂಪ) ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.

ಅಮಾಯಕರ ಮಾರಣಹೋಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಟೈರ್‌ಗಳಿಗೆ ಬೆಂಕಿ ಹಚ್ಚಿ, ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, “ಉಗ್ರರಿಗೆ ಧಿಕ್ಕಾರ”, “ಪಾಕಿಸ್ತಾನ ಮುರ್ದಾಬಾದ್” ಎಂದು ಕಿಡಿಕಾರಿದರು.

ಪ್ರತಿಭಟನೆಯಿಂದಾಗಿ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ವಿಹಿಂಪ ಮುಖಂಡರು, ಈ ನರಮೇಧಕ್ಕೆ ಕಾರಣರಾದ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ಅಮಾಯಕ ಪ್ರವಾಸಿಗರ ಮೇಲಿನ ದಾಳಿಯು ಮಾನವೀಯತೆಗೆ ಒಡ್ಡಿದ ದೊಡ್ಡ ಮುಖಭಂಗ. ಇಂತಹ ಕೃತ್ಯಗಳಿಗೆ ತಕ್ಕ ಶಿಕ್ಷೆಯಾಗಬೇಕು,” ಎಂದು ಅವರು ಆಗ್ರಹಿಸಿದರು.