ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ್‌ಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಬೆಂಗಳೂರು: ಪ್ರಜಾವಾಣಿಯ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ ಅವರಿಗೆ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.

ಈವರೆಗೆ ಈ ಪ್ರಶಸ್ತಿಯನ್ನು 30 ಹಿರಿಯ ಪತ್ರಕರ್ತರು ಪಡೆದಿದ್ದು, ಇವರು 31ನೇಯವರಾಗಿದ್ದಾರೆ. ಕಳೆದ ವರ್ಷ ‘ಪ್ರಜಾವಾಣಿ’ ವಿಶೇಷ ವರದಿಗಾರರಾಗಿದ್ದ ಹೊನಕೆರೆ ನಂಜುಂಡೇಗೌಡರಿಗೆ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿ ₹15 ಸಾವಿರ  ನಗದು ಹಾಗೂ ಫಲಕ ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸದ್ಯದಲ್ಲೇ ನಡೆಯಲಿದೆ.

ಎಂ. ನಾಗರಾಜ ಅವರು ಮೂಲತಃ ಮೈಸೂರಿನವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೈಸೂರು ಮಿತ್ರ, ಮಹಾನಂದಿ, ಸಾಧ್ವಿ ಪತ್ರಿಕೆಗಳಲ್ಲಿ ದುಡಿದು 1993ರಲ್ಲಿ ಪ್ರಜಾವಾಣಿ ಪ್ರವೇಶ ಮಾಡಿದರು. ವರದಿಗಾರ, ಉಪಸಂಪಾದಕ, ಹಾಸನ ಜಿಲ್ಲಾ ವರದಿಗಾರ, ಬೆಂಗಳೂರಿನಲ್ಲಿ ಮುಖ್ಯ ವರದಿಗಾರ, ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ, ಮತ್ತೆ ಬೆಂಗಳೂರಿನಲ್ಲಿ ಸುದ್ದಿ ಸಂಪಾದಕ. 2018ರಿಂದ ಡೆಪ್ಯೂಟಿ ಎಡಿಟರ್ ಆಗಿ  ಈಗ ಕಾರ್ಯನಿರ್ವಹಿಸುತ್ತಿದ್ದಾರೆ.