ಸಕಲೇಶಪುರ, ಮೇ 6: ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಈಚೆಗೆ ನಡೆದಿದ್ದ ಚಿನ್ನದ ಸರ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಸಿಕ್ಕಿಬಿದ್ದ ಕಳ್ಳನ ಹಿನ್ನೆಲೆ ಹಾಗೂ ಆತ ಆ ಹಾದಿ ಹಿಡಿಯಲು ಕಾರಣಗಳು ಯುವಜನರು ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ಆತಂಕ ಮೂಡಿಸುವಂತಿದೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 25ರಂದು ಮಠಸಾಗರದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರಿಂದ 25 ಗ್ರಾಂ ತೂಕದ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದನು. ಜಾಲದಲ್ಲಿ ಸಿಕ್ಕಿಬಿದ್ದಿದ್ದಾನೆ.
ಟಾಪರ್ ಸರಗಳ್ಳನಾಗಿದ್ದು ಏಕೆ?
ಬಂಧಿತ ಆರೋಪಿ ಸೈಯದ್ ಅಲಿ ನಡಾಫ್ (27), ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹುಲ್ಲೂರು ಗ್ರಾಮದವನು. ತನಿಖೆ ವೇಳೆ ಬಹಿರಂಗಗೊಂಡಿರುವ ವಿವರಗಳು ಜನರ ಮನಸ್ಸನ್ನು ತಟ್ಟುವಂತಿವೆ.
2016ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದ ನಡಾಫ್, ಆಮೇಲೆ ಶೋಕಿಜೀವನ ಮತ್ತು ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಬಹಳಷ್ಟು ಕಡೆ ಸಾಲ ಮಾಡಿದ್ದನು. ಅದರಿಂದ ಹೊರಬರಲು ಸಾಧ್ಯವಾಗದೆ ಓಡಾಡುತ್ತಿದ್ದ ಆತ ಸರಗಳ್ಳತನ ಮಾಡಿ ಅದರಿಂದ ಹಣ ಸಂಪಾದಿಸುವ ಹಾದಿ ಹಿಡಿದಿದ್ದ. ಸಕಲೇಶಪುರದಿಂದ ಊರಿಗೆ ಮರಳಿದ್ದ ಆತ ತಾನು ಸಿಕ್ಕಿಬೀಳಲಿಲ್ಲ ಎಂದು ನಿರಾಳವಾಗಿದ್ದ.
ಸಕಲೇಶಪುರ ಪೊಲೀಸ್ ಕಾರ್ಯಾಚರಣೆ:
ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಸಿಟಿವಿ ಫುಟೇಜ್ ಮತ್ತು ತಂತ್ರಜ್ಞಾನದ ಸಹಾಯ ಪಡೆದು ಆರೋಪಿಯನ್ನು ಗದಗ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಎಸ್ಪಿ ಮೊಹಮ್ಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳು ವೆಂಕಟೇಶ್ ನಾಯ್ಡು ಮತ್ತು ತಮ್ಮಯ್ಯ, ಡಿವೈಎಸ್ಪಿ ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ ಜಗದೀಶ್, ಪಿಎಸ್ಐ ಮಹೇಶ್ ಮತ್ತು ಕೃಷ್ಣಪ್ಪ ನೇತೃತ್ವದ ತಂಡ ರಚಿಸಲಾಗಿತ್ತು.
ತಂತ್ರಜ್ಞಾನ ವಿಭಾಗದ ಸಿಬ್ಬಂದಿ ಪೀರ್ ಖಾನ್, ಲೋಕೇಶ್, ಆತ್ಮಾನಂದ ಹಾಗೂ ಹೆಡ್ ಕಾನ್ಸ್ಟೇಬಲ್ ಪೃಥ್ವಿ ಮತ್ತು ಕಾನ್ಸ್ಟೇಬಲ್ಗಳಾದ ಚಂದ್ರಕಾಂತ್, ರೇವಣ್ಣ, ಅಶೋಕ್, ಶಾಂತರಾಜು ಅವರೂ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಗದಗದಂತಹ ದೂರದೂರಿಗೆ ತೆರಳಿ ಆರೋಪಿಯನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.