ನಗರಸಭೆಗೆ ಗ್ರಹಣ ಹಿಡಿದಿದೆ-ಸಭಾಂಗಣ ನೋಡಿದ್ರೆ ನಾಚಿಕೆ ಆಗುತ್ತೆ: ಅಧಿಕಾರಿಗಳ ವಿರುದ್ಧ ಎಂಪಿ ಗರಂ

ಹಾಸನ: ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಹಾಸನ ನಗರಸಭೆ ಸಭಾಂಗಣದ ಒಳ ಹಾಗೂ ಹೊರ ಆವರಣ ನೋಡಿದರೆ ನಾಚಿಕೆಯಾಗುತ್ತೆ ಎಂದು ಸಂಸದ ಶ್ರೇಯಸ್ ಪಟೇಲ್ ಅಸಮಾಧಾನ ಹೊರ ಹಾಕಿದರು.

15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭಾಂಗಣದ ಒಳಗೆ ಎಲ್ಲೆಂದರಲ್ಲಿ ಕಡತ ಜೋಡಿಸಲಾಗಿದೆ. ಸೂಕ್ತ ಸೌಲಭ್ಯ ಇಲ್ಲ, ಮೈಕ್ ಕೆಟ್ಟಿವೆ. ನನ್ನ ನಿರೀಕ್ಷೆ ಏನಿತ್ತು ಅದು ಹುಸಿಯಾಗಿದೆ. ಇಲ್ಲಿನ ಅನೇಕ ಅಧಿಕಾರಿಗಳ ನಡುವೆ ಹೊಂದಾಣ ಕೆಯೇ ಇಲ್ಲ ಎಂದು ವಿಷಾದಿಸಿದರು.

ನಗರಸಭೆ ವಾತಾವರಣವೇ ಸರಿ ಇಲ್ಲ. ಕಾಯಂ ಆಯುಕ್ತರಿಲ್ಲ. ಇದನ್ನು ನೋಡಿದರೆ ಒಂದು ರೀತಿ ಗ್ರಹಣ ಹಿಡಿದಿದೆ ಎನಿಸುತ್ತಿದೆ ಎಂದು ಬೇಸರ ಹೊರ ಹಾಕಿದರು.

ಇದೇ ವೇಳೆ ಆರೋಗ್ಯ ನಿರೀಕ್ಷಕರು, ಆರ್‌ಐಗಳು ಸೇರಿದಂತೆ ಕೆಲ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಗರಂ ಆದ ಶ್ರೇಯಸ್, ಯಾವುದೇ ದೂರು ಬರದಂತೆ ಮರ್ಯಾದೆಯಿಂದ ಕೆಲಸ ಮಾಡಿ. ಇಲ್ಲದಿದ್ದರೆ ವರ್ಗ ಮಾಡಿಸಿಕೊಂಡು ಬೇರೆಡೆ ಹೋಗಿ ಎಂದು ವಾರ್ನಿಂಗ್ ಮಾಡಿದರು. ಎಲ್ಲ ಜನಪ್ರತಿನಿಧಿಗಳು, ಜನರಿಗೆ ಗೌರವಕೊಟ್ಟು ಕೆಲಸ ಮಾಡಿ ಎಂದು ಎಚ್ಚರಿಸಿದರು.
ನಗರಸಭೆಯಲ್ಲಿ ದಂಧೆ ನಡೆಯುತ್ತಿದೆ, ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂಬ ದೂರು ಕೇಳಿ ಬಂದವು.

ಇದೇ ವೇಳೆ ಧನಂಜಯ ಎಂಬ ಅಧಿಕಾರಿ ಹಣಕೊಟ್ಟವರಿಗೆ ಖಾತೆ ಮಾಡಿಕೊಡುತ್ತಾರೆ ಎಂಬ ಆರೋಪವೂ ಕೇಳಿ ಬಂತು. ಇವರನ್ನು ತರಾಟೆಗೆ ತೆಗೆದುಕೊಂಡ ಸಂಸದರು, ಅಧಿಕಾರಿ ವಿರುದ್ಧ ರಿಪೋರ್ಟ್ ಹಾಕಿ ಎಂದು ಸೂಚಿಸಿದರು. ಆಯುಕ್ತ ರಮೇಶ್, ವಾರದೊಳಗೆ ಖಾತೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಅರೆ-ಕೊರೆ ನಿಭಾಯಿಸಿ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಗ ನಗರಕ್ಕೆ, ನಗರಸಭೆಗೆ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿ ಎಂದು ಎಂಪಿ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಪ್ರಭಾರಿ ಆಯುಕ್ತ ರಮೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಎಇಇ ಚನ್ನೇಗೌಡ ಸಭೆಯಲ್ಲಿದ್ದರು. ನಗರಸಭೆ ಅಧ್ಯಕ್ಷರಾದಿಯಾಗಿ ಜೆಡಿಎಸ್‌ನ ಎಲ್ಲ ಸದಸ್ಯರು ಗೈರಾಗಿದ್ದರು.

ಪೌರಕಾರ್ಮಿಕರ ಕೊರತೆ ಕೂಗು:
ನಗರಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಗಂಭೀರ ಚರ್ಚೆ ನಡೆಯಿತು. ನಗರ ಸ್ವಚ್ಛತೆಯನ್ನು ಹೇಗೆಲ್ಲಾ ಮಾಡುತ್ತಿದ್ದೀರಿ ಎಂದು ಸಂಸದರು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಗಳು ಹಾಲಿ 112 ಜನ ಕಾಯಂ ಪೌರ ಕಾರ್ಮಿಕರಿದ್ದಾರೆ. ಅಷ್ಟೇ ಹುದ್ದೆಗಳು ಖಾಲಿ ಇವೆ. 31 ಆಟೋ, 11 ಟ್ರಾಕ್ಟರ್ಗಳಲ್ಲಿ ಕಸ ವಿಲೇವಾರಿ ಮಾಡಲು ಚಾಲಕರು, ಸಹಾಯಕರು, ಲೋಡರ‍್ಸ್ ಸೇರಿ 142 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. 25 ಹಳ್ಳಿಗಳು ನಗರಸಭೆಗೆ ಸೇರಿವೆ. ಹೀಗಾಗಿ ಪೌರಕಾರ್ಮಿಕ ಸಮಸ್ಯೆ ಸಾಕಷ್ಟಿದೆ. ಹಾಲಿ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 400 ಮಂದಿ ಪೌರಕಾರ್ಮಿಕರು ಬೇಕು ಎಂದು ಸಭೆಯ ಗಮನಕ್ಕೆ ತಂದರು.

ಸದಸ್ಯರಾದ ಸಂತೋಷ್, ಆರ್.ಮೋಹನ್ ಮೊದಲಾದವರು 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ 2, 5 ಸಾವಿರ ಜನಸಂಖ್ಯೆಗೆ ಕೇವಲ ಒಬ್ಬರು ಪೌರಕಾರ್ಮಿಕರಿದ್ದಾರೆ. ಇದರಿಂದ ವಾರ್ಡ್ ಸ್ವಚ್ಛತೆಗೆ ಸಮಸ್ಯೆಯಾಗಿದೆ ಎಂದರು. ಒಂದಲ್ಲ, 35 ವಾರ್ಡ್ಗಳಲ್ಲೂ ಇದೇ ರೀತಿಯ ಸಮಸ್ಯೆ ಇದೆ ಎಂದರು.

ಹಾಸನ ನಗರ ವ್ಯಾಪ್ತಿಯಲ್ಲಿ 11 ಓವರ್ ಹೆಡ್ ನೀರಿನ ಟ್ಯಾಂಕ್ ಇದ್ದು, ಅಲ್ಲಿ ಸ್ವಚ್ಛತೆ ಇಲ್ಲದೆ, ಯುಜಿಡಿ ನೀರು ಸೇರಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತಿ ಪರಿಣಾಮ ಬೀರೋದು ಬೇಡ. ಕೂಡಲೇ ಕೂಡಲೇ ಸ್ವಚ್ಛಗೊಳಿಸಿ ಎಂದು ಸಂಸದರು ಸೂಚಿಸಿದರು. ಇದಕ್ಕೆ ವಾರದೊಳಗೆ ಟೆಂಡರ್ ಕರೆದು ಎಲ್ಲಾ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದಾಗಿ ಇಂಜಿನಿಯರ್ ಕವಿತಾ ತಿಳಿಸಿದರು.