ಹಾಸನ, ಏಪ್ರಿಲ್ 30, 2025: ಅರಸೀಕೆರೆ ನಗರದಲ್ಲಿ ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾದ ಭವ್ಯ ಮೆರವಣಿಗೆಯಲ್ಲಿ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ತಮಟೆ ಬಾರಿಸಿ, ಕುಣಿದು ಕುಪ್ಪಳಿಸಿ ಸಾರ್ವಜನಿಕರ ಗಮನ ಸೆಳೆದರು.
ಅರಸೀಕೆರೆಯ ಎಪಿಎಂಸಿ ಬಳಿಯಿಂದ ಆರಂಭವಾದ ಈ ಮೆರವಣಿಗೆಗೆ ಶಾಸಕರು ರಾಸುಗಳಿಗೆ ಪೂಜೆ ಸಲ್ಲಿಸಿ, ಈಡುಗಾಯಿ ಹೊಡೆದು ಚಾಲನೆ ನೀಡಿದರು.ನೂರಾರು ಜೋಡೆತ್ತಗಳು, ವಿವಿಧ ಕಲಾತಂಡಗಳು ಹಾಗೂ ಸಾವಿರಾರು ಸಾರ್ವಜನಿಕರು ಭಾಗವಹಿಸಿದ ಈ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜನಮನ ಸೂರೆಗೊಂಡಿತು.
ಧರ್ಮ- ಜಾತಿವ್ಯವಸ್ಥೆ ವಿರುದ್ಧ ಅಸಮಾಧಾನ:
ಮೆರವಣಿಗೆ ಬಳಿಕ ಮಾತನಾಡಿದ ಕೆ.ಎಂ. ಶಿವಲಿಂಗೇಗೌಡ, ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ವಿರುದ್ಧದ ನರಮೇಧ ಪ್ರಕರಣವನ್ನು ಖಂಡಿಸಿದರು.
“ಪಹಲ್ಗಾಮ್ನಲ್ಲಾದರೂ ಆಗಲಿ, ಎಲ್ಲಿಯಾದರೂ ಆಗಲಿ, ಮಾನವ ಮಾನವನಾಗಿ ಬದುಕಬೇಕು. ಜಾತಿವ್ಯವಸ್ಥೆ ಈ ದೇಶದಲ್ಲಿ ತಾಂಡವವಾಡಬಾರದು. ಮೊದಲು ಜಾತಿವ್ಯವಸ್ಥೆ ಹೋಗಬೇಕು,” ಎಂದು ಒತ್ತಿ ಹೇಳಿದರು.ಅಲ್ಲದೆ, “ಪಾಕಿಸ್ತಾನದ ಮೇಲಿನ ಯುದ್ಧದ ವಿಚಾರವನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಂತಹ ದೊಡ್ಡವರಿಗೆ ಬಿಟ್ಟಿದ್ದೇವೆ. ಒಳ್ಳೆಯ ತೀರ್ಮಾನ ತೆಗೆದುಕೊಂಡರೆ ಜನರು ಜೈ ಎನ್ನುತ್ತಾರೆ, ಇಲ್ಲವಾದರೆ ಮನಸ್ಸಿನಲ್ಲಿ ಕೊರಗುತ್ತಾರೆ,” ಎಂದು ತಿಳಿಸಿದರು.
ಮಾನವ ಕುಲವು ಎಚ್ಚೆತ್ತುಕೊಂಡು ಒಗ್ಗೂಡಿ ಬಾಳಬೇಕು ಎಂದು ಕರೆ ನೀಡಿದ ಶಾಸಕರು, ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಒತ್ತಿ ಹೇಳಿದರು.ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಭಕ್ತಾದಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.