
ಕನ್ನಡ ಪೋಸ್ಟ್ ವರದಿ
ಚನ್ನರಾಯಪಟ್ಟಣ: ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿಯ ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಯು ಸಾಕಾರಗೊಳ್ಳುವಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಪರಿಶ್ರಮವಿರುವುದರಿಂದ ಯೋಜನೆಗೆ ಅವರ ಹೆಸರನ್ನೇ ಇಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಬಾಗೂರು ಹೋಬಳಿಯ ಕಾರೇಹಳ್ಳಿ ಸಮೀಪ ನಡೆಯುತ್ತಿರುವ ಏತನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಯ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರೀಶೀಲಿಸಿ ಮಾತನಾಡಿದರು.
ತಮ್ಮ ಹುಟ್ಟೂರಿನ ರೈತರಿಗೆ ಭವಿಷ್ಯದಲ್ಲಿ ಅನುಕೂಲವಾಗಲೆಂದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ನಂತರ ಬಸವರಾಜ ಬೊಮ್ಮಾಯಿ ಅವರಿಗೆ ಭೈರಪ್ಪ ಅವರು ಯೋಜನೆ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದರು ಎಂದರು.
ಸಂತೇಶಿವರ, ಅಗ್ರಹಾರ ಬೆಳಗುಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಭೈರಪ್ಪ ಅವರು ಮುತುವರ್ಜಿ ವಹಿಸಿ ಸರ್ಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ಈ ಯೋಜನೆಗೆ ಆರಂಭದಿಂದಲೂ ಕ್ಷೇತ್ರದ ಶಾಸಕನಾಗಿ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದೇನೆ ಎಂದರು.
ಕಾರೇಹಳ್ಳಿ ಸಮೀಪ ರಂಗಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಕೆಗೆ ಅವಕಾಶ ಕಲ್ಪಿಸಿರಲಿಲ್ಲ. ತಾವು ಈ ಬಗ್ಗೆ ಸೋಮವಾರ ಖುದ್ದಾಗಿ ಭೇಟಿ ಮಾಡಿ ಕಂದಾಯ ಇಲಾಖೆ ವತಿಯಿಂದ ತಮಗೆ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೆ. ಅವರು ಪೈಪ್ ಲೈನ್ ಅಳವಡಿಕೆಗೆ ಸಮ್ಮತಿಸಿ ಸಹಕಾರ ನೀಡಿದ್ದಾರೆ ಎಂದರು.
ಈ ಕಾಮಗಾರಿ ಬುಧವಾರ ಪೂರ್ಣಗೊಳ್ಳಲಿದ್ದು ಶನಿವಾರದ ಒಳಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ನಂತರ ಉದ್ಘಾಟನೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ನವಿಲೆ ಏತನೀರಾವರಿ ಯೋಜನೆಯ ಮೂಲಕ ಈಗಾಗಲೇ ಎಡ ಹಾಗೂ ಬಲಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ನವಿಲೆ ಕೆರೆ ಸದ್ಯದಲ್ಲೇ ತುಂಬಿ ಕೊಡಿ ಬೀಳಲಿದೆ. ಈ ಯೋಜನೆಯ ಮೂಲಕವೂ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂತೇಶಿವರ, ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆಗೆ ತಿಪಟೂರು ತಾಲೂಕು ವ್ಯಾಪ್ತಿಯ ಜಾಬುಘಟ್ಟ ಬಳಿ ಜಾಕ್ವೆಲ್ ನಿರ್ಮಾಣಕ್ಕೆ ಆ ಭಾಗದ ರೈತರಾದ ದಿನೇಶ್ ಮತ್ತು ಅನೇಕ ರೈತರು ಹೆಚ್ಚಿನ ಸಹಕಾರ ನೀಡಿದ್ದಾರೆ. ಈ ಯೋಜನೆ ಪ್ರಾರಂಭದಲ್ಲಿ ಬೇರೆ ಮಾರ್ಗದಲ್ಲಿ ರೈತರ ಜಮೀನಿನಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿ ನೀರು ತರುವ ಉದ್ದೇಶವಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸುವ ಅನುಮಾನದಲ್ಲಿ ಈ ಯೋಜನೆಯನ್ನು ರಸ್ತೆಯ ಪಕ್ಕದಲ್ಲಿ ತೆಗೆದುಕೊಂಡು ಹೋಗಲಾಯಿತು. ಇಲ್ಲದಿದ್ದರೆ ಯೋಜನೆ ಇಷ್ಟು ಬೇಗ ಪೂರ್ಣಗೊಳ್ಳುತ್ತಿರಲಿಲ್ಲ ಎಂದರು.
ಕಾವೇರಿ ನೀರಾವರಿ ನಿಗಮದ ಚನ್ನರಾಯಪಟ್ಟಣ ಉಪ ವಿಭಾಗದ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸ್ ಹಾಗೂ ಕಂದಾಯ ಇಲಾಖೆ ಸಹಕಾರದಿಂದ ಸ್ಥಗಿತಗೊಂಡಿದ್ದ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಈ ಭಾಗದ ರೈತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ಸಾಹಿತಿ ಡಾ.ಎಸ್ ಎಲ್ ಭೈರಪ್ಪನವರ ಕನಸಿನ ಯೋಜನೆಯಾಗಿದ್ದು ಈ ಭಾಗದ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ಹೆಚ್ಚಿನ ಪರಿಶ್ರಮಪಟ್ಟು ಅನುದಾನ ತಂದಿದ್ದರು. ಅವರ ಕನಸಿನ ಯೋಜನೆ ಸಹಕಾರಗೊಳ್ಳಲು ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಯೋಜನೆ ಪೂರ್ಣಗೊಳ್ಳಲು ಶ್ರಮ ವಹಿಸಿದ್ದಾರೆ ಎಂದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎ.ಆರ್.ದೀಪಕ್, ಸಹಾಯಕ ಇಂಜಿನಿಯರ್ ಪುನೀತ್, ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಭರತ್ ರೆಡ್ಡಿ, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎ.ಸತೀಶ್, ಕೃಷಿ ಪತ್ತಿನ ಅಧ್ಯಕ್ಷ ಸಿ.ಡಿ.ರೇವಣ್ಣ, ಮುಖಂಡರಾದ ಕೆ.ಟಿ.ನಟೇಶ್, ತೋಟಿ ನಾಗರಾಜ್, ಬಸವೇಗೌಡ, ಉದ್ಯಮಿ ಚಿಪ್ಪಿನ ಚಂದ್ರು, ಅಣತಿ ವೆಂಕಟೇಶ್, ಗಂಜಿಗೆರೆ ಕೆಂಪೇಗೌಡ, ಕುಳ್ಳೇಗೌಡ, ಲೋಕೇಶ್, ಹುಲಿಕೆರೆ ಸಂಪತ್ ಕುಮಾರ್, ಸಿ.ಜೆ.ಕುಮಾರ್, ಎಂ.ಎಸ್.ಸುರೇಶ್ ಸೇರಿದಂತೆ ಸಂತೇಶಿವರ, ಅಗ್ರಹಾರ ಬೆಳಗುಲಿ, ದ್ಯಾವಲಾಪುರ ಹಾಗೂ ಹುಲ್ಲೇನಹಳ್ಳಿ ಭಾಗದ ನೂರಾರು ರೈತರು ಹಾಜರಿದ್ದರು.