ಕಾಡಾನೆಗೆ ಬಲಿಯಾದ ಷಣ್ಮುಖ ಕುಟುಂಬಕ್ಕೆ ಸಾಂತ್ವನ ಹೇಳಿ ಕಣ್ಣೀರಿಟ್ಟ ಶಾಸಕ ಸಿಮೆಂಟ್ ಮಂಜು: ಇಟಿಎಫ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ

ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡಾನೆ-ಮಾನವ ಸಂಘರ್ಷದಲ್ಲಿ ಮನುಷ್ಯರು ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಬೈಕೆರೆ ಗ್ರಾಮದಲ್ಲಿ ಈಚೆಗೆ ಕಾಡಾನೆ ದಾಳಿಗೆ ಬಲಿಯಾದ ಕಾಫಿ ಬೆಳೆಗಾರ ಷಣ್ಮುಖ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು.

ಅಲ್ಲಿ ಹಾಜರಿದ್ದ ಬೆಳೆಗಾರರು ಅರಣ್ಯ ಇಲಾಖೆಯ ಕಾಡಾನೆ ಕ್ಷಿಪ್ರ ಪಡೆಯವರು(ಇ.ಟಿ.ಎಫ್) ಜನರಿಗೆ ಕಾಡಾನೆಗಳ ಚಲನವಲನಗಳ ಕುರಿತು ಸಮರ್ಪಕ ಮಾಹಿತಿ ಕೊಡುತ್ತಿಲ್ಲ. ಅವರು ಒಂದು ಭಾಗದಲ್ಲಿ ಕಾಡಾನೆಗಳಿರುವ ಕುರಿತು ಮಾಹಿತಿ ನೀಡಿ ಮತ್ತೊಂದು ಭಾಗಕ್ಕೆ ಹೋಗುವಷ್ಟರಲ್ಲಿ ಕಾಡಾನೆಗಳು ಬೇರೆಡೆಗೆ ಹೋಗಿರುತ್ತವೆ.

ಅಲ್ಲದೆ ವಾಟ್ಸಪ್ ಮೂಲಕ ಕಾಡಾನೆ ಚಲನವಲನಗಳ ಕುರಿತು ನೀಡುವ ಮಾಹಿತಿ ಸರಿಯಿರುವುದಿಲ್ಲ. ಹೀಗಾಗಿ ಡ್ರೋನ್ ಮೂಲಕ ಕಾಡಾನೆಗಳ ಚಲನವಲನಗಳನ್ನು ಗುರುತಿಸಿ ನಿಖರವಾದ ಮಾಹಿತಿ ಕೊಡಬೇಕು ಎಂದು ಕೆಲವು ಬೆಳೆಗಾರರು ಸಲಹೆ ನೀಡಿದರು.

ಇದೀಗ ಷಣ್ಮುಖರವರನ್ನು ಸಾಯಿಸಿರುವ ಆನೆಯ ಕುರಿತೆ ನಿಖರವಾದ ಮಾಹಿತಿ ಅರಣ್ಯ ಇಲಾಖೆಗೆ ಇಲ್ಲ. ಕೆಲವೇ ಆನೆಗಳಿಗೆ ಮಾತ್ರ ರೇಡಿಯೋ ಕಾಲರ್ ಹಾಕುವುದರಿಂದ ಯಾವುದೆ ಪ್ರಯೋಜನವಿಲ್ಲ ಎಲ್ಲಾ ಕಾಡಾನೆಗಳಿಗೂ ರೇಡಿಯೋ ಕಾಲರ್ ಹಾಕಬೇಕು,ಮೂಡಿಗೆರೆ ಕಡೆಯಿಂದ ಈ ಕಡೆಗೆ ಆನೆಗಳನ್ನು ಓಡಿಸುವುದನ್ನು ನಿಲ್ಲಿಸಬೇಕು. ಕಾಡಾನೆ ಪೀಡಿತ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಸರಿಯಾಗಿ ಅಳವಡಿಕೆ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕಾಡಾನೆ ಕ್ಷಿಪ್ರ ಪಡೆಯವರು ಸಾರ್ವಜನಿಕರಿಗೆ ಸ್ಪಂದಿಸಬೇಕು. ಆದರೆ ಕಾಡಾನೆ ಕ್ಷಿಫ್ರ ಪಡೆಯ ಎಸಿಎಫ್ ಶರೀಫ ಎಂಬ ಮಹಿಳಾ ಅಧಿಕಾರಿ ಕೆಲವು ತಿಂಗಳ ಹಿಂದೆ ಕಾಣಿಸಿಕೊಂಡಿದ್ದರಷ್ಟೇ. ಇದಾದ ನಂತರ ಅವರು ಬಂದೇ ಇಲ್ಲ. ಕನಿಷ್ಠ 3 ತಿಂಗಳಿಗೊಮ್ಮೆ ಅವರು ಬೆಳೆಗಾರರು ಹಾಗೂ ಸಾರ್ವಜನಿಕರ ಜೊತೆ ಸಭೆ ಮಾಡಬೇಕು. ಆದರೆ ಅವರು ಸಾರ್ವಜನಿಕರಿಂದ ಅಂತರ ಕಾಯಿದುಕೊಂಡಿದ್ದಾರೆ. ಕಾಡಾನೆ ಕ್ಷಿಪ್ರ ಪಡೆಯವರು ಸಹ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಏಕೆಂದರೆ ಅವರ ಮೇಲೂ ಸಹ ಕಾಡಾನೆಗಳು ದಾಳಿ ಮಾಡುವ ಸಾಧ್ಯತೆಯಿದೆ. ಇಟಿಎಫ್ ಸಿಬ್ಬಂದಿ ತಾವು ಮೈ ಮರೆತು ಕೆಲಸ ಮಾಡದೆ ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು ಎಂದರು.

ಕಾಡಾನೆಗಳ ಸಮಸ್ಯೆ ಕುರಿತು ಅರಣ್ಯ ಸಚಿವರ ಬಳಿ ಈಗಾಗಲೇ ಮಾತನಾಡಿದ್ದೇನೆ ಇಂದಿನಂದಲೇ ಪುಂಡಾನೆಗಳನ್ನು ಗುರುತಿಸಿ ಒಂದು ಆನೆಯನ್ನು ಹಿಡಿದು ಕೆಲವು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು ಎಂದರು.

ಈ ಸಂರ್ಧಭದಲ್ಲಿ ಷಣ್ಮುಖರವರು ಪತ್ನಿ ಪತಿಯನ್ನು ಕಳೆದುಕೊಂಡಿದಕ್ಕೆ ಶಾಸಕರ ಮುಂದೆ ಕಣ್ಣೀರು ಹಾಕಿದ ಹಿನ್ನೆಲೆಯಲ್ಲಿ ಶಾಸಕರು ಸಹ ಕಣ್ಣೀರು ಹಾಕಿದರು.

ವಲಯ ಅರಣ್ಯಾಧಿಕಾರಿ ಹೇಮಂತ್, ಅರಣ್ಯಾಧಿಕಾರಿಗಳಾದ ಮಹಾದೇವ್, ಮಂಜುನಾಥ್, ಮೃತ ಷಣ್ಮುಖ ಸಹೋದರ ಸಂಜೀವ್, ಬೆಳೆಗಾರ ಮುಖಂಡರಾದ ಪ್ರಸನ್ನ ಕುಮಾರ್, ಯೋಗೇಶ್, ಕುಮಾರ್, ಬಿರಡಹಳ್ಳಿ ಬಾಲು, ಯಶ್ವಂತ್, ಅಗ್ನಿ ಸೋಮಶೇಖರ್, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.