ಹಾಸನ: ದೇವಾಲಯದ ಒಳ ಗೋಡೆಗೆ ಅಳವಡಿಸಿದ್ದ ದಾನಿಯೊಬ್ಬರ ನಾಮಫಲಕದ ಕಲ್ಲನ್ನು ದುಷ್ಕರ್ಮಿಗಳು ಒಡೆದು ಎಸೆದ ಘಟನೆ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿಯ ದ್ಯಾವಮ್ಮ ದೇವಾಲಯದಲ್ಲಿ ನಡೆದಿದೆ.
ಇತ್ತೀಚೆಗೆ ಗ್ರಾಮದ ದ್ಯಾವಮ್ಮ ದೇವಾಲಯದ ಜಾತ್ರಾ ಮಹೋತ್ಸವ ನಡೆದಿದ್ದು, ಈ ಹಿನ್ನೆಲೆಯಲ್ಲಿ ದ್ಯಾವಮ್ಮ ದೇಗುಲದ ನೆಲಹಾಸಿಗೆ ಗ್ರಾಮದ ದಾನಿಯೊಬ್ಬರು ಗ್ರಾನೈಟ್ ಕಲ್ಲುಗಳನ್ನು ಹಾಕಿಸಿದ್ದರು. ಅವರ ಗೌರವಾರ್ಥವಾಗಿ ಗ್ರಾಮಸ್ಥರು ಹಾಕಿಸಿದ್ದ ದಾನಿಗಳ ನಾಮಫಲಕವನ್ನು ಗ್ರಾಮದ ಕೆಲವರು ಮಂಗಳವಾರ ಸಂಜೆ ದೇಗುಲದ ಬಾಗಿಲು ತೆಗೆಸಿ ಒಡೆದು ಹಾಕಿ ಕಿಡಿಗೇಡಿತನ ಮೆರೆದಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗಿದೆ, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.