ಹಾಸನ-ಚಿಕ್ಕಮಗಳೂರು ರೈಲು‌ಮಾರ್ಗ ಮೂರು ವರ್ಷಗಳಲ್ಲಿ ಪೂರ್ಣ, ಉಪಚುನಾವಣೆಯಲ್ಲಿ ಬಿಜೆಪಿಗೇ ಗೆಲುವು: ರೈಲ್ವೆ ಸಚಿವ ವಿ.ಸೋಮಣ್ಣ

ಹಾಸನ: ಚಿಕ್ಕಮಗಳೂರು-ಬೇಲೂರು-ಆಲೂರು ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಜಿಲ್ಲಾಧಿಕಾರಿ ಶೀಘ್ರವೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಿದ್ದು ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಂಗಳೂರಿಗೆ ಹೆಚ್ಚುವರಿ ರೈಲು ಸಂಚಾರದ ಜತೆಗೆ ಚಿಕ್ಕಮಗಳೂರು-ಬೇಲೂರು-ಆಲೂರಿಗೆ 585 ಎಕರೆ ಜಾಗ ಸ್ವಾಧೀನಕ್ಕೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.

ನಾನು ಬಂದ ಮೇಲೆ ಕರ್ನಾಟಕ ರಾಜ್ಯದಲ್ಲಿ ಹನ್ನೊಂದು ಯೋಜನೆಗಳು 1800 ಹೊಸ ಲೈನ್‌ಗಳನ್ನು ಹಾಕಲು ಚಾಲನೆ ಕೊಟ್ಟಿದ್ದೇವೆ. ಈಗಾಗಲೇ ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಹತ್ತು ಹಲವಾರು ಕಡೆ ಕೆಲಸ ನಡೆಯುತ್ತಿದೆ ಎಂದರು.

43 ಸಾವಿರ ಕೋಟಿ ರೂ. ನನೆಗುದಿಗೆ ಬಿದ್ದಿರುವ ಕೆಲಸ ಕೈಗೆತ್ತುಕೊಂಡಿದ್ದೇವೆ. ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಮಸ್ಯೆ ಆಗಿದೆ. ಶೀಘ್ರವೇ ಬಗೆಹರಿಸಲಾಗುವುದು.

ರಾಷ್ಟ್ರದ ಪ್ರಧಾನಮಂತ್ರಿ ನಮ್ಮ ನೆಚ್ಚಿನ ನರೇಂದ್ರಮೋದಿಯವರು ದೇಶದ ಇತಿಹಾಸಲ್ಲಿ ಭಾರತೀಯರಿಗೆ ಭವಿಷ್ಯ ಇದೆ ಅನ್ನುವುದನ್ನು ಹತ್ತು ವರ್ಷಗಳಲ್ಲಿ ತೋರಿಸಿಕೊಟ್ಟಿದ್ದಾರೆ.

44 ಸಾವಿರ ಡಬ್ಲಿಂಗ್ ಲೈನ್‌ನ್ನು ಮಾಡಿ, 98% ಎಲೆಕ್ಟ್ರಿಫಿಕೇಷನ್ ಮಾಡಿ ಹೊಸಲೈನ್‌ಗಳನ್ನು ತ್ವರಿತಗತಿಯಲ್ಲಿ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.

104 ವಂದೇಭಾರತ್ ರೈಲುಗಳು 24 ರಾಜ್ಯಗಳಲ್ಲಿ 294 ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ 10 ರೈಲುಗಳು ಸಂಚರಿಸುತ್ತಿವೆ. ಹೊಸದಾಗಿ 30 ಸಾವಿರ ಹೊಸ ಬೋಗಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಒಂದೊಂದು ಪ್ಯಾಸೆಂಜರ್ ರೈಲುಗಳಿಗೆ ಮೂರು-ನಾಲ್ಕು ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ ಎಂದರು.

ತುಮಕೂರಿನಿಂದ ಬೆಂಗಳೂರಿಗೆ ಮೆಮೊ ಟ್ರೈನ್ ಸಂಚಾರ ಆರಂಭಿಸಿದೆ. ಅದೇ ರೈಲು ಹಾಸನದಿಂದ ಬೆಂಗಳೂರಿಗೆ ಓಡಾಡಲು ನಮ್ಮ ದರದಲ್ಲಿ 60% ನಲ್ಲಿ ಓಡಾಡಲು ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ.

ಹಾಸನಾಂಬೆ ರಾಷ್ಟ್ರದ ಪ್ರಧಾನಮಂತ್ರಿಗಳಿಗೆ, ರಾಷ್ಟ್ರದ ರೈಲ್ವೆ ಸಚಿವರಿಗೆ, ನನಗೂ ಕೂಡ ಆಶೀರ್ವಾದ ಮಾಡಿದ್ದಾಳೆ.
ಭಾರತೀಯ ರೈಲ್ವೆ ಇಲಾಖೆ ಇಡೀ ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಆಗಿದೆ

ನ.1, ನ.2 ರಂದು ಪ್ರಧಾನಮಂತ್ರಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ನಾಳೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಒಂದು ಲಕ್ಷ ಉದ್ಯೋಗಿಗಳಿಗೆ ಅರ್ಹತಾ ಪತ್ರ ಕೊಡಲಿದ್ದೇವೆ ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ಅವರ ಚಿಂತನೆ. ಪತ್ರಕರ್ತರಿಗೆ, ಹಿರಿಯ ನಾಗರಿಕರಿಗೆ ಪಾಸ್ ಸ್ಥಗಿತಗೊಳಿಸಲಾಗಿದೆ. ಅವರಿಗೆ ಅವಕಾಶ ಕೊಡಲು ನನ್ನದು ಒತ್ತಾಯವಿದೆ. ಪ್ರಧಾನಮಂತ್ರಿ ಅವರು ಆ ಕೆಲಸ ಮಾಡುತ್ತಾರೆ. ಭಾರತ ಸರ್ಕಾರ ಯಾವುದೇ ರಾಜ್ಯದ ಸರ್ಕಾರದ ಜೊತೆ ಸಂಘರ್ಷ ಮಾಡಲ್ಲ, ಅಭಿವೃದ್ಧಿಗೆ ಅಡ್ಡಿ ಮಾಡಲ್ಲ. ಎಂದರು.

ವಿಧಾನಸಭೆ ಉಪಚುನಾಣೆಯಲ್ಲಿ ಮೂರೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ನಾನು ನ.2 ರಿಂದ ಪ್ರಚಾರಕ್ಕೆ ಹೋಗುತ್ತೇನೆ. ನಾವೇ ಗೆಲ್ತೀವಿ, ನಾವೇ ಗೆಲ್ತೀವಿ, ನಾವೇ ಗೆಲ್ತಿವಿ ಎಂದು ಪುನರುಚ್ಚರಿಸಿದರು.