ಹಾಸನ: ವಿಡಿಯೋ ಮಾಡಿದವರು ಹಾಗೂ ಪೆನ್ಡ್ರೈವ್ ಹಂಚಿದವರಿಬ್ಬರನ್ನೂ ಬಲಿ ಹಾಕಿ ರಾಜ್ಯದ ಗೌರವ, ಮಾನ, ಮರ್ಯಾದೆ ಕಾಪಾಡಬೇಕು ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಹೇಸಿಗೆಯಾದಂತಹ ವಿಚಾರ, ಇದು ರಾಜ್ಯಕ್ಕೆ ನಮಗೆ ಘನತೆ ತಂದುಕೊಡುವ ವಿಚಾರ ಅಲ್ಲ. ಇದನ್ನು ಬಹಳ ರಾಜಕೀಯವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಎಲ್ಲಿ ಮೂಲ ಇದೆ, ಯಾರು ಇದಕ್ಕೆ ಮೂಲವೋ ಅವರನ್ನು ಬಂಧಿಸಲಿ ಎಂದರು.
ಅನ್ಯಾಯವಾಗಿರುವ ಸಂಸತ್ರಸ್ತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕು. ಇದನ್ನು ರಾಜಕೀಯ ದೊಂಬರಾಟ ಮಾಡಿಕೊಂಡು ದಿನವೂ ಟಿವಿ ಮುಂದೆ ಬಂದು ಕಥೆ ಕಟ್ಟಿ ಹೇಳುವುದಲ್ಲ. ಎಷ್ಟು ದಿನಗಳ ಕಾಲ ಕಥೆ ಕಟ್ಟಲು ಆಗುತ್ತದೆ, ಎಲ್ಲರಿಗೂ ಗೊತ್ತಿದೆ ಎಂದರು.
ಈ ಘಟನೆ ನಡದೇ ಇಲ್ಲಾ ಅಂತ ಹೇಳಿ ಬಿಡಲಿ. ರಾಜಕೀಯ ತೀಟೆ ತೀರಿಸಿಕೊಳ್ಳಲು, ರಾಜಕೀಯಕ್ಕೋಸ್ಕರ ಇಂತಹ ಆಟ ಆಡುವುದನ್ನು ನಿಲ್ಲಿಸಬೇಕು. ರಾಜಕೀಯ ಆಟಕ್ಕಾಗಿ ಪೆನ್ಡ್ರೈವ್ ತರ್ತಾರೆ ಅವರಿಗೆ ಮುಖಕ್ಕೆ ಉಗಿದು ಮನೆಗೆ ಕಳುಹಿಸಬೇಕು ಎಂದರು.
ನಿಮಗೆ ಮಾಡಲು ಕೆಲಸವಿಲ್ಲವಾ? ಮೊದಲು ಹೋಗಿ ಅಪರಾಧಿ ಹಿಡಿದುಕೊಂಡು ಬರಲಿ. ಎಲ್ಲೇ ಅಡಗಿದ್ದರೂ ಅಪರಾಧಿ ಕರೆತರಲು ಆಗಲ್ವಾ? ನಮ್ಮ ಸರ್ಕಾರಕ್ಕೆ ಅಪರಾಧಿ ಹಿಡಿದು ಕರೆತರಲು ಆಗಲ್ಲ. ಕೇಂದ್ರ ಸರ್ಕಾರ ಸಿಬಿಐ ತಂಡವನ್ನು ಹೊರ ದೇಶಕ್ಕೆ ಕಳುಹಿಸಿ ಕರೆತರಬೇಕು. ರಾಜ್ಯದ ಮುಖ್ಯಮಂತ್ರಿಗಳಿಂದ ಅದು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಸ್ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ವಿಚಾರದಲ್ಲಿ ಮಾಧ್ಯಮದವರ ಮೇಲೆ ಗರಂ ಆದ ಕೆ.ಎಂ.ಶಿವಲಿಂಗೇಗೌಡ, ಎಸ್ಐಟಿಯವರು ದಿನವೂ ಏನು ಮಾಡಿದ್ದೀವಿ ಎಂದು ನಿಮ್ಮ ಮುಂದೆ ಬಿಚ್ಚಿ ವರದಿ ಓದಬೇಕಾ?ಕಾರ್ತಿಕ್ಗೌಡನನ್ನು ಎಸ್ಐಟಿ ಅವರು ಹಿಡಿದಿಲ್ಲ, ವಿಚಾರ ಮಾಡಿಲ್ಲ ಎಂದು ಹೇಗೆ ನೀವು ಹೇಳ್ತೀರಾ? ನಾಲ್ಕೈದು ದಿನ ಟೈಂ ಕೊಡಿ, ಯಾರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಪಡ್ತಾರೆ ನೋಡೋಣ, ಯಾವನ್ ಮುಚ್ಚಿ ಹಾಕಲು ಪ್ರಯತ್ನ ಪಡ್ತಾನೆ? ಎಸ್ಐಟಿ ಸರಿ ಇಲ್ಲ ಅಂದ್ರೆ ನೋಡೋಣ ಎಂದು ಹರಿಹಾಯ್ದರು.
ಪೆನ್ಡ್ರೈವ್ ಹಂಚಿದವರನ್ನು ಏಕೆ ಬಂಧನ ಮಾಡಿಲ್ಲ ಎಂದು ಎಸ್ಐಟಿ ಅವರನ್ನು ಕೇಳೋಣ, ಪೆನ್ಡ್ರೈವ್ ಆರೋಪಿಗಳನ್ನು ಬಂಧಿಸದಿದ್ದರೆ ಆಗ ಎಸ್ಐಟಿ ಅವರು ಪಕ್ಷಪಾತ ಮಾಡಿದ್ದಾರೆ, ಅವರು ಸರಿಯಲ್ಲ ಎಂದು ದೂಷಣೆ ಮಾಡೋಣ. ಇನ್ನೂ ನಾಲ್ಕು ದಿನ ಟೈಂ ಕೊಡಿ ನೋಡೋಣ. ಈಗ ಇದು ಕೋರ್ಟ್ನಲ್ಲಿ ಇದೆ. ಬಹಳ ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ, ಯಾವುದೇ ಅನುಮಾನ ಬೇಡ ನೊಂದವರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್, ಎಲ್.ಆರ್ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಆಡಿಯೋ, ಇಂತಹ ಕಥೆಗಳು ಸಾವಿರ ಇದ್ದಾವೆ. ತನಿಖೆ ನಡೆಯಲಿ ಆಮೇಲೆ ಎಲ್ಲಾ ಗೊತ್ತಾಗುತ್ತೆ ಎಂದರು.