ಹಾಸನ: ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪ್ರಧಾನಮಂತ್ರಿ ನರೇಂದ್ರ ಮೋದಿ ಬದಲಾವಣೆಗೆ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ದೇಶ ಯಾವ ಪಕ್ಷದ ಸ್ವತ್ತಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ನಿಗೆ ಈ ದೇಶವನ್ನು ಒಪ್ಪಿಸಲು ಸಾಧ್ಯವಿಲ್ಲ,” ಎಂದು ತೀಕ್ಷ್ಣ ಟೀಕೆ ಮಾಡಿದರು.
ಮೋದಿ ಆಡಳಿತದ ವಿರುದ್ಧ ಕಿಡಿಕಾರಿದ ಲಾಡ್
ಕಾರ್ಮಿಕ ಸಚಿವ ಲಾಡ್, ಮೋದಿ ಸರ್ಕಾರದ ನಿರ್ಧಾರಗಳ ವಿರುದ್ಧ ಕಿಡಿಕಾರುತ್ತಾ, “ಅಮೆರಿಕಾದಿಂದ ಕಾಲಿಗೆ ಚೈನ್ ಹಾಕಿಕೊಂಡು ತಂದು ಬಿಸಾಕಿದ್ರಲ್ಲ, ಇದು ಇಡೀ ದೇಶಕ್ಕೆ ಅವಮಾನ,” ಎಂದು ಪ್ರಹಾರ ಮಾಡಿದರು. ಅವರು, ಕಳೆದ ಹತ್ತು ವರ್ಷದಲ್ಲಿ ದೇಶದ ಆರ್ಥಿಕತೆ ಕುಸಿದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, “ಭಾರತದಲ್ಲಿ 18 ಲಕ್ಷ ಜನ ಪಾಸ್ಪೋರ್ಟ್ ಸೇರೆಂಡರ್ ಮಾಡಿದ್ದಾರೆ, ಆದರೆ ಇದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ,” ಎಂದು ಹೇಳಿದರು.
ಮೋದಿ ಸರ್ಕಾರದ ದಶಕದ ಆಡಳಿತದ ಲೆಕ್ಕವೇ ಇಲ್ಲವೆ?
“ಬಿಜೆಪಿಯವರು 11 ವರ್ಷದಿಂದ ಏನು ಮಾಡಿದ್ರು? ಅದಕ್ಕೆ ಲೆಕ್ಕ ಇಲ್ಲ, ಬುಕ್ ಇಲ್ಲ,” ಎಂದು ಪ್ರಶ್ನಿಸಿದ ಲಾಡ್, ಪ್ರಧಾನಮಂತ್ರಿ ಮೋದಿಯವರ ಜೀವನಶೈಲಿ ಕುರಿತು ಕಿಡಿಕಾರಿದರು. “ಸಾಹೇಬ್ರು ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಾರೆ, 16 ಗಂಟೆ ಕೆಲಸ ಮಾಡ್ತಾರೆ ಅಂತಾರೆ, ಆದರೆ ಅವರ ಕಣ್ಣುಗಳು ಹೊಳೆಯುತ್ತಿವೆ. ಏನು ಕೆಲಸ ಮಾಡ್ತಾರೆ ಅನ್ನೋದು ಜನರಿಗೆ ಗೊತ್ತಾಗುತ್ತಿಲ್ಲ,” ಎಂದು ಟೀಕಿಸಿದರು.
ಮೋದಿ ಅವರು ಒಮ್ಮೆ ಪ್ರೆಸ್ ಮೀಟ್ ನಡೆಸಲಿ
ಮೋದಿ ಅವರು ರಾಜಕೀಯ ವಿಸ್ತೃತ ಚರ್ಚೆಗಳಿಂದ ದೂರವಿರುವುದರ ಬಗ್ಗೆ ಲಾಡ್ ಕಿಡಿಕಾರಿದರು: “ಎಲ್ಲಾ ರಾಜ್ಯಗಳಿಗೆ ಹೋಗಿ ಮೋದಿ ಸಾಹೇಬ್ರು ಪ್ರೆಸ್ ಮೀಟ್ ಮಾಡಲಿ. ಎಂದಾದರೂ ಓಪನ್ ಡಿಸ್ಕಷನ್ ಮಾಡಿದ್ದಾರಾ?” ಎಂದು ಪ್ರಶ್ನಿಸಿದರು. ಅವರು, ಪ್ರಧಾನಿ ಮೋದಿಯವರ ಹತ್ತು ವರ್ಷದ ಆಡಳಿತಕ್ಕೆ ತೀಕ್ಷ್ಣ ಟೀಕೆ ಮಾಡುತ್ತಾ, “ಮೋದಿ ಇಲ್ಲದೆ ಬಿಜೆಪಿಗೆ ಯಾರೂ ಇಲ್ಲವೆ? ಕಳೆದ ಹತ್ತು ವರ್ಷಗಳ ನೋವು ಮುಂದುವರಿಯಲಿದೆ,” ಎಂದರು.
“ಮಹಾರಾಜ ಅಲ್ಲಿಂದ ಇಳಿಯುವುದೇ ಪರಿಹಾರ”
ಪ್ರಧಾನಿ ಸ್ಥಾನಕ್ಕೆ ಬದಲಾವಣೆ ಅಗತ್ಯವಿದೆ ಎಂಬುದಾಗಿ ಲಾಡ್ ಹೇಳಿದರು: “ಭಾರತವನ್ನು ಉಳಿಸಬೇಕಾದರೆ, ಮೋದಿ ಅವರ ಜಾಗದಲ್ಲಿ ಕಾರ್ಯಕ್ಷಮತೆಯುಳ್ಳ ವ್ಯಕ್ತಿಯನ್ನು ನೇಮಕ ಮಾಡಬೇಕು. ಗಡ್ಕರಿ ಅಥವಾ ಬೇರೆ ಯಾರೆ ಆದರೂ ಬರಲಿ, ಯುವಕರ ಭವಿಷ್ಯ ಉಳಿಯಲಿ,” ಎಂದರು.
ಪ್ರಚಾರಕ್ಕಿಂತ ಅಭಿವೃದ್ಧಿಗೆ ಹಣ ಮೀಸಲಿಡಿ
ಸಂತೋಷ್ ಲಾಡ್ ಅವರು ಮೋದಿ ಅವರ ಬೃಹತ್ ಪ್ರಚಾರ ತಂತ್ರವನ್ನೂ ಟೀಕಿಸಿ, “ಪ್ರಧಾನಿ ಅವರ ಪಬ್ಲಿಸಿಟಿಗೆ 6000 ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಖೇಲೋ ಇಂಡಿಯಾಗೂ ಅಷ್ಟು ಹಣ ಕೊಡಲ್ಲ,” ಎಂದು ಆರೋಪಿಸಿದರು. “ಬಿಜೆಪಿಯವರಿಗೆ ಕೈಮುಗಿದು ಕೇಳ್ತೀನಿ – ಪ್ರಧಾನಮಂತ್ರಿ ಬದಲಾಗಲಿ, ದೇಶ ಉಳಿಯಲಿ,” ಎಂದರು.