ಯುಪಿಎಸ್‌ಸಿ-2024: ಸಕಲೇಶಪುರದ ಸಾಧಕಿ ಧನ್ಯಗೆ 982 ನೇ ಸ್ಥಾನ

ಹಾಸನ: ಈ ಸಾಲಿನ  ಯುಪಿಎಸ್‌ಸಿ  ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನ ನಗರದ ನಿವಾಸಿ ಕೆ.ಎಸ್.ಧನ್ಯ 982 ನೇ ರ‍್ಯಾಂಕ್  ಪಡೆದಿದ್ದಾರೆ.

ಇವರು ಸಾಂಬಾರ ಮಂಡಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಟಿ.ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ಹಿರಿಯ ಶ್ರೇಣಿ ಸಿವಿಲ್ ಕೋರ್ಟ್‌ನಲ್ಲಿ ಹಿರಿಯ ಶಿರಸ್ತೇದಾರರಾಗಿರುವ ಪಿ.ವಿಜಯಕುಮಾರಿ ದಂಪತಿ ಪುತ್ರಿ.

ಮೂರು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಮೊದಲ ಎರಡು ಬಾರಿ ಪ್ರಿಲಿಮ್ಸ್ ಸಹ ಪಾಸ್  ಆಗಿರಲಿಲ್ಲ. ಮೂರನೇ ಪ್ರಯತ್ನದಲ್ಲಿ ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

 ಐದನೇ ತರಗತಿವರೆಗೆ ಸಕಲೇಶಪುರ ಪಟ್ಟಣದ ರೋಟರಿ ಆಂಗ್ಲ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅವರು, 6 ರಿಂದ 12 ನೇ ತರಗತಿವರೆಗೆ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.

ನಿಟ್ಟೆ ತಾಂತ್ರಿಕ ಶಿಕ್ಷಣ  ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಇ ಅಂಡ್ ವೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಗ್ರಂಥಾಲಯಗಳ ಪುಸ್ತಕಗಳನ್ನು ಅಧ್ಯಯನ ಮಾಡಿಯೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು ಎಂದು ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ.