ಹಾಸನ: ಖಾಸಗಿ ಬಸ್ನಲ್ಲಿ ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದು ಹೃದಯಾಘಾತದಿಂದ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆ, ಇಲ್ಲೇನಹಳ್ಳಿ ಗ್ರಾಮದ ಟಿ.ಸ್ವಾಮಿ (39) ಮೃತಪಟ್ಟ ವ್ಯಕ್ತಿ.
ಮುಂಬೈನಿಂದ ಮಂಡ್ಯಕ್ಕೆ ಹೋಗುತ್ತಿದ್ದ GA-07-T-3303 ನಂಬರ್ನ ಸ್ಲೀಪರ್ ಕೋಚ್ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಚನ್ನರಾಯಪಟ್ಟಣದಲ್ಲಿ ವಿಶ್ರಾಂತಿಗೆಂದು ಬಸ್ ನಿಲ್ಲಿಸಿದಾಗ ಅವರು ಸಹ ಪ್ರಯಾಣಿಕರೆಲ್ಲರೂ ಕೆಳಗಿಳಿದರೂ ಸ್ವಾಮಿ ಮಾತ್ರ ಇಳಿದಿರಲಿಲ್ಲ. ಶೌಚಗೃಹ ಬಳಸಲಿ ಎಂದು ನಿರ್ವಾಹಕ ಅವರನ್ನು ತಟ್ಟಿ ಎಬ್ಬಿಸಲು ಯತ್ನಿಸಿದರೂ ಅವರು ಅಲ್ಲಾಡಲಿಲ್ಲ. ಆಗ ಅನುಮಾನಗೊಂಡು ಪರಿಶೀಲಿಸಿದಾಗ ಉಸಿರು ನಿಂತಿರುವುದು ತಿಳಿಯಿತು.
ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.