ಕುಡಿಯಲು ಹಣ ನೀಡಲಿಲ್ಲವೆಂದು ಹೆತ್ತತಾಯಿಯನ್ನೇ ಹೊಡೆದು ಕೊಂದ ಪಾಪಿ ಪುತ್ರ!

ಹಾಸನ; ಕುಡಿಯಲು ಹಣ ನೀಡಲಿಲ್ಲವೆಂಬ ಕಾರಣಕ್ಕಾಗಿ ಪಾಪಿಯೊಬ್ಬ ಹೆತ್ತತಾಯಿಯನ್ನೇ ಮನಬಂದಂತೆ ಥಳಿಸಿ ಕೊಂದ ಘಟನೆ ಅರಕಲಗೂಡು ತಾಲ್ಲೂಕಿನ, ಮಧುರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮ್ಮ (61) ಪುತ್ರನಿಂದಲೇ ಕೊಲೆಯಾದ ದುರ್ದೈವಿ ತಾಯಿ. ಭರತ್ (26) ತಾಯಿಯನ್ನೇ ಹೊಡೆದು ಕೊಂದ ದುರುಳ.

ಪೈಂಟರ್ ಆಗಿ ಕೆಲಸ ಮಾಡುತ್ತಿರುವ ಭರತ್ ಕುಡಿತದ ದಾಸನಾಗಿದ್ದು ಅ.29 ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಮತ್ತೂ ಕುಡಿಯಲು ಹಣ ನೀಡುವಂತೆ ತಾಯಿ ಚಿಕ್ಕಮ್ಮನನ್ನು ಒತ್ತಾಯಿಸಿದ್ದ. ಆದರೆ ತಾಯಿ ಹಣ ನೀಡಲಿ ನಿರಾಕರಿಸಿದ್ದರು.

ಇದರಿಂದ ಕೋಪಗೊಂಡ ಭರತ್, ತಾಯಿಗೆ ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆ ಗುದ್ದಿಸಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ತಾಯಿ ಕುಸಿದು ಬಿದ್ದಿದ್ದರಿಂದ ಆತ ಪರಾರಿಯಾಗಿದ್ದ.

ಗ್ರಾಮಸ್ಥರು ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದ ಚಿಕ್ಕಮ್ಮನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸಂಬಂಧಿಕರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಕೊಣನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.