ಹಾಸನದಲ್ಲಿ ರೇವಣ್ಣ ಗುಡುಗು: ಸಮಯಕ್ಕಾಗಿ ಕಾಯ್ತಿದ್ದೀನಿ, ಬಡ್ಡಿ ಸಮೇತ ತೀರಿಸದಿದ್ದರೆ ದೇವೇಗೌಡರ ಮಗನೇ ಅಲ್ಲ

ಹಾಸನ, ಮೇ 04, 2025: “ಕೆಲವರು ದೇವೇಗೌಡರದ್ದು, ರೇವಣ್ಣನದ್ದು ಮುಗಿಯಿತು ಎನ್ನುತ್ತಾರೆ. ನಾನು ಸಮಯಕ್ಕಾಗಿ ಕಾಯುತ್ತಿದ್ದೇನೆ. ಇದನ್ನೆಲ್ಲ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ,” ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.

ತಾಲೂಕಿನ ದ್ಯಾಪಲಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ, ದೇವೇಗೌಡರ ಕೊಡುಗೆಯನ್ನು ಜನರು ಮರೆಯಲಾರರು ಎಂದರು.

.”ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು – ಇವೆಲ್ಲವನ್ನೂ ಯಾರು ತಂದರು? ಶಿಕ್ಷಣ ಕ್ಷೇತ್ರಕ್ಕೆ ಕುಮಾರಸ್ವಾಮಿ 5,000 ಕೋಟಿ ರೂ. ಒದಗಿಸಿದ್ದರು. ದೇವೇಗೌಡರು ಪ್ರಧಾನಿಯಾಗಿ ಕೇವಲ ಹತ್ತು ತಿಂಗಳಲ್ಲಿ ಹಾಸನ-ಮೈಸೂರು ರೈಲ್ವೆ ಯೋಜನೆಯನ್ನು ಜಾರಿಗೆ ತಂದರು,”. ಆದರೆ, ಕಾಂಗ್ರೆಸ್ ಸರ್ಕಾರ ಹಾಸನ-ಮೈಸೂರು ರೈಲ್ವೆ ಯೋಜನೆಯನ್ನು ಸ್ಥಗಿತಗೊಳಿಸಿತು ಎಂದು ಆರೋಪಿಸಿದರು.

“ಕಾಂಗ್ರೆಸ್‌ನವರು ಈ ಜಿಲ್ಲೆಯಲ್ಲಿ ಸುಳ್ಳು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈಗೆ ಸಿಕ್ಕಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.”ನಾನಿಲ್ಲೇ ಇದ್ದೀನಿ, ಎಷ್ಟು ದಿನ ಇರುತ್ತದೆ ನೋಡೋಣ”‌ ಎಂದರು.

 ಹಿಂದೆಯೂ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳನ್ನು ಕಳೆದುಕೊಂಡಿದ್ದ ದೇವೇಗೌಡರು, ಕೇವಲ ಐದು ವರ್ಷಗಳಲ್ಲಿ ಅಧಿಕಾರಕ್ಕೆ ಮರಳಿದ್ದನ್ನು ಸ್ಮರಿಸಿದ ಅವರು, “ಜನರಿಗೆ ದೇವೇಗೌಡರ ಕೊಡುಗೆ ಗೊತ್ತಿದೆ,” ಎಂದರು.

ಮೋದಿಗೆ ಬೆಂಬಲ, ಎನ್‌ಡಿಎಗೆ ಸಂಪೂರ್ಣ ಸಹಕಾರ:
“ಈ ದೇಶ ಉಳಿಯಬೇಕಾದರೆ ಪ್ರಧಾನಿ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಎನ್‌ಡಿಎ ಭಾಗವಾಗಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ,” ಎಂದು ಸ್ಪಷ್ಟಪಡಿಸಿದರು. ಆದರೆ, “ಈ ಜಿಲ್ಲೆಯದ್ದು ನಮಗೆ ಬೇಕಿಲ್ಲ,” ಎಂದು ಹೇಳುವ ಮೂಲಕ ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿಯಿಂದ ದೂರವಿರುವ ಸಂದೇಶವನ್ನೂ ನೀಡಿದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ:
ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೇವಣ್ಣ, “ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವವರಿಗೆ ಜನರು ಉತ್ತರ ಕೊಡುತ್ತಾರೆ,” ಎಂದರು.