ಹಾಸನ: ಗುಡುಗು-ಸಿಡಿಲಿನೊಂದಿಗೆ ವರುಣಾರ್ಭಟ, ಇಳಿಸಂಜೆ ಜನಜೀವನ ಅಸ್ತವ್ಯಸ್ತ

ಹಾಸನ, ಏಪ್ರಿಲ್ 19: ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದ್ದು ಮಿಂಚು, ಗುಡುಗು, ಸಿಡಿಲು ಸಹಿತ ವರುಣನ ಆರ್ಭಟ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.

ಹಾಸನ, ಅರಸೀಕೆರೆ, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದ್ದು, ವಾಹನ ಸವಾರರು, ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸಿದರು.

ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿತ್ತು, ಉತ್ತಮ ಮಳೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದರು. ಆದರೆ, ಮಳೆ ನಿಲುಗಡೆಯಾದ್ದರಿಂದ ಕೃಷಿ ಕಾರ್ಯಗಳಿಗೆ ತೊಡಕು ಉಂಟಾಗಿತ್ತು.

ಪ್ರಸ್ತುತ, ಜಿಲ್ಲೆಯಾದ್ಯಂತ ಮಳೆ ಮರು ಆರಂಭವಾಗಿರುವುದು ಕೃಷಿಕರಲ್ಲಿ ಸಂತಸ ಮೂಡಿಸಿದ್ದು, ಬೇಸಿಗೆಯ ಸುಡು ಬಿಸಿಲಿನಿಂದ ತಲ್ಲಣಿಸಿದ್ದ ಭೂಮಿಯನ್ನು ತಂಪಾಗಿಸಿದೆ.