ಹಾಸನ, ಏಪ್ರಿಲ್ 14: ನಗರದ ಎಸ್ಬಿಎಂ ಕಾಲೋನಿಯಲ್ಲಿ ಸಿಟಿ ಸಿವಿಲ್ ಕೋರ್ಟ್ನ ನ್ಯಾಯಾಧೀಶ ಜೈಶಂಕರ್ ಅವರ ಮಾಲೀಕತ್ವದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಕಳೆದ ರಾತ್ರಿ ನಡೆದಿದೆ.
ಕಬ್ಬಿಣದ ರಾಡ್ನಿಂದ ಮನೆಯ ಹಿಂಬಾಗಿಲನ್ನು ಮುರಿಯಲು ಯತ್ನಿಸಿದ ಚೋರರು, ಶಬ್ದಕ್ಕೆ ಎಚ್ಚರಗೊಂಡ ಚಾಲಕನ ಸಮಯಪ್ರಜ್ಞೆಯಿಂದ ದುಷ್ಕೃತ್ಯ ಮುಂದುವರಿಸದೇ ಪರಾರಿಯಾಗಿದ್ದಾರೆ.

ನ್ಯಾಯಾಧೀಶ ಜೈಶಂಕರ್ ಅವರು ತಮ್ಮ ಮನೆಯನ್ನು ಫರ್ಟಿಲೈಸರ್ಸ್ ಕಂಪೆನಿಯೊಂದರ ನೌಕರ ಭರತ್ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ರಾತ್ರಿ ವೇಳೆ ಕಳ್ಳರು ಹಿಂಬಾಗಿಲಿನ ಬೀಗ ಒಡೆಯಲು ಕಬ್ಬಿಣದ ರಾಡ್ ಬಳಸಿದ್ದಾರೆ. ಈ ವೇಳೆ ಬಾಗಿಲು ಮುರಿಯುವ ಶಬ್ದಕ್ಕೆ ಎಚ್ಚರಗೊಂಡ ಚಾಲಕ ಭರತ್, ಲೈಟ್ ಆನ್ ಮಾಡಿದ ಕೂಡಲೇ ಚೋರರು ಗಾಬರಿಗೊಂಡು ಸ್ಥಳದಿಂದ ಓಡಿಹೋಗಿದ್ದಾರೆ. ಕಳ್ಳರು ಒಂದು ಏರ್ ಗನ್ ಮತ್ತು ಕಬ್ಬಿಣದ ರಾಡ್ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ನ್ಯಾಯಾಧೀಶ ಜೈಶಂಕರ್ ಅವರು ಸಿಟಿ ಸಿವಿಲ್ ಕೋರ್ಟ್ 57ರಲ್ಲಿ ಸೇವೆ ಸಲ್ಲಿಸುತ್ತಿದ್ದು, ಚಲನಚಿತ್ರ ನಟ ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವವರು ಎಂಬುದು ಗಮನಾರ್ಹ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕಳ್ಳರ ಗುರುತು ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.