ಹಾಸನ, ಜೂನ್ 08: (Holenarasipura) ಹೊಳೆನರಸೀಪುರ ನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಚಿನ್ನಾಭರಣ ಕಳ್ಳತನದಲ್ಲಿ ತೊಡಗಿದ್ದ ನಾಲ್ವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಲಾಗಿದ್ದು, 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಮತ್ತು ವಿದ್ಯಾ (29) ಬಂಧಿತ ಆರೋಪಿಗಳು. ಒಂದೇ ಗ್ರಾಮದವರಾಗಿರುವ ಈ ನಾಲ್ವರು, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಗುರಿಯಾಗಿಸಿ, ಅವರ ಚಿನ್ನದ ಸರ, ನೆಕ್ಲೆಸ್ ಮತ್ತು ಪರ್ಸ್ಗಳನ್ನು ಚಲಾಕಿಯಿಂದ ಕದಿಯುತ್ತಿದ್ದರು.
ಶಶಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಕ್ರಷರ್ಗಳಲ್ಲಿ ಕಲ್ಲು ಒಡೆಯುವ ಕೆಲಸದಲ್ಲಿದ್ದರು. ಆದರೆ, ಈ ನಾಲ್ವರು ಕಳ್ಳತನವನ್ನೇ ಫ್ಯಾಷನ್ ಆಗಿ ಮಾಡಿಕೊಂಡಿದ್ದರು. ಬಂಧಿತರಿಂದ 35 ಗ್ರಾಂ ಚಿನ್ನದ ಸರ, 22 ಗ್ರಾಂ ನೆಕ್ಲೆಸ್, 5 ಗ್ರಾಂ ಬೆಳ್ಳಿ ಗಣಪತಿ ಡಾಲರ್ ಮತ್ತು 29 ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಶಿ ಮತ್ತು ವಿದ್ಯಾ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಹೊಳೆನರಸೀಪುರ ಪೊಲೀಸರು ಈ ಗ್ಯಾಂಗ್ನ ಇತರ ಚಟುವಟಿಕೆಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.