ಕೆರೆಯಲ್ಲಿ ಈಜಲು ಹೋದ ನಾಲ್ವರು ಮಕ್ಕಳು ನೀರು ಪಾಲು; ಒಬ್ಬ ಬಾಲಕ ಪಾರು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ನಾಲ್ವರು ಬಾಲಕರು ನೀರು ಪಾಲಾದ ಘಟನೆ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆಯಲ್ಲಿ ನಡೆದಿದೆ.

ಮುತ್ತಿಗೆ ಜೀವನ್(13), ಸಾತ್ವಿಕ್(11), ವಿಶ್ವ ಹಾಗೂ ಪೃಥ್ವಿ (12) ಮೃತ ಬಾಲಕರು. ಚಿರಾಗ್ (10) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಗೆ ರಜೆ ಇರುವುದರಿಂದ ಈಜಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸುವ ಯತ್ನದಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಆಗಮಿಸಿ ಶವ ಹುಡುಕಾಟ ಕಾರ್ಯವನ್ನು ಚುರುಕಾಗಿ ನಡೆಸಲು ಸೂಚಿಸಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.