
ಹಾಸನ: ಮಾಜಿ ಶಾಸಕ, ಭ್ರಷ್ಟಾಚಾರದ ವಿರುದ್ಧದ ಹೋರಾಟದಿಂದ ಸದ್ದು ಮಾಡುವ ಎ.ಟಿ.ರಾಮಸ್ವಾಮಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೆಡಿಎಸ್ ನಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂದು ಆರೋಪಿಸಿ ಜೆಡಿಎಸ್ ತೊರೆದಿದ್ದ ಅವರು ಕೇಂದ್ರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿ ಅವರಿಗೆ ಉತ್ತಮ ರಾಜಕೀಯ ಅವಕಾಶಗಳನ್ನು ನಿರೀಕ್ಷಿಸಲಾಗಿತ್ತು.
ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗಿತ್ತು. ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದ ಅವರು ಈಗ ಸದಸ್ಯತ್ವಕ್ಕೂ ಗುಡ್ ಬೈ ಹೇಳಿದ್ದಾರೆ.
ಅವರು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬರೆದಿರುವ ರಾಜೀನಾಮೆ ಪತ್ರದ ಪೂರ್ಣಪಾಠ ಇಲ್ಲಿದೆ:

ಇಂದ :
ಎ.ಟಿ. ರಾಮಸ್ವಾಮಿ,
ಕೃಷಿಕರು ಮತ್ತು ಮಾಜಿ ಶಾಸಕರು.
ಗೆ,
ಶ್ರೀ ಬಿ.ವೈ. ವಿಜಯೇಂದ್ರರವರು,
ರಾಜ್ಯಾಧ್ಯಕ್ಷರು,
ಭಾರತೀಯ ಜನತಾ ಪಾರ್ಟಿ, ಕರ್ನಾಟಕ ರಾಜ್ಯ.
ಮಾನ್ಯರೆ,
ವಿಶ್ವ ತಾಪಮಾನ ವಿಪರೀತ ಏರಿಕೆಯಿಂದಾಗಿ ಹವಾಮಾನದ ಅಸಮತೋಲನ ಉಂಟಾಗಿದೆ. ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪನಗಳು ಸೃಷ್ಟಿಯಾಗುತ್ತಿವೆ. ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಪೂರಿತವಾಗಿವೆ. ಬೆಟ್ಟ, ಗುಡ್ಡ, ಅರಣ್ಯಗಳ ನಾಶದಿಂದ ನದಿ, ತೊರೆಗಳೂ ಬತ್ತಿ ಹೋಗಿವೆ. ಅಂತರ್ಜಲ ಕುಸಿದಿದೆ. ಜೀವ ಸಂಕುಲಗಳಿಗೆ ಸಂಕಷ್ಟ ಬಂದೊದಗಿದೆ. ಈ ಹೊತ್ತಿನಲ್ಲಾದರೂ ನಾವು ಜನರಲ್ಲಿ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕಾರ್ಯ ಮಾಡಬೇಕಾಗಿದೆ. ಪರಿಸರ ಉಳಿದರೆ ಜೀವ ಸಂಕುಲಗಳೂ ಉಳಿಯುತ್ತವೆ. ಈ ಸನ್ನಿವೇಶದಲ್ಲಿ ರಾಜಕಾರಣಕ್ಕಿಂತ ಪರಿಸರ ಸಂರಕ್ಷಣೆ ಅತ್ಯಂತ ಮಹತ್ವವೆಂದು ಭಾವಿಸಿರುತ್ತೇನೆ. ನನ್ನ ಪೂರ್ಣ ಸಮಯವನ್ನು, ನನ್ನ ಬದುಕಿನ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುತ್ತೇನೆ. ಈ ಬಗ್ಗೆ ಈಗಾಗಲೇ ನಾನು ದಿನಾಂಕ : 11-04-2025ರಂದು ದೂರವಾಣಿ ಮೂಲಕ ತಮ್ಮ ಜೊತೆ ಮಾತನಾಡಿರುತ್ತೇನೆ.
ಆದುದರಿಂದ ನಾನು ಭಾರತೀಯ ಜನತಾ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ತಾವೆಲ್ಲರೂ ತೋರಿದ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆಗಳು.
0:15.04.2025
ತಮ್ಮ ವಿಶ್ವಾಸಿ
(ಎ.ಟಿ. ರಾಮಸ್ವಾಮಿ)