ರೈತರ ಜಮೀನು ವಕ್ಫ್ ಮಂಡಳಿ ಕಬಳಿಸದಂತೆ ಕಡಿವಾಣ ಹಾಕು ಎಂದು ಹಾಸನಾಂಬೆಯನ್ನು ಬೇಡಿದ್ದೇನೆ; ಕೆ.ಎಸ್.ಈಶ್ವರಪ್ಪ

ಹಾಸನ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಕುಟುಂಬ ಸಮೇತವಾಗಿ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದರು.

ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಈ ವರ್ಷವೂ ಕೂಡ ಆ ತಾಯಿ ಹಾಸನಾಂಬೆ ದರ್ಶನ ಭಾಗ್ಯ ಕೊಟ್ಟಿದ್ದಾರೆ. ಆ ತಾಯಿಯ ಕೃಪೆಯಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ ಎಂದರು.

ಧರ್ಮ, ರಾಜ್ಯ, ರಾಜಕಾರಣ ವಿಚಾರಕ್ಕೆ ಬಂದಾಗ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಗೊಂದಲವಿದೆ. ತಾಯಿ ಅದನ್ನು ಸರಿ ಮಾಡಮ್ಮ. ಎಲ್ಲಾ ರಾಜಕಾರಣಿಗಳು ಕೂಡ ಧರ್ಮದ ರಾಜಕಾರಣ ಮಾಡುವ ನಿಟ್ಟಿನಲ್ಲಿ ನೀನು ಆಶೀರ್ವಾದ ಮಾಡಮ್ಮ ಎಂದು ಹಾಸನಾಂಬೆ ದೇವಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

ರೈತರಿಗೆ ತಲತಲಾಂತರಗಳಿಂದ ಬಂದಿರುವ ಜಮೀನನ್ನು ಯಾವದ್ಯಾವುದೋ ಕಾರಣಗಳಿಂದ ವಕ್ಫ್ ಆಸ್ತಿಯಾಗಿ ಕಬಳಿಕೆಯಾಗುತ್ತಿರುವುದು ನಿಜಕ್ಕೂ ನನಗೆ ತುಂಬಾ ನೋವಾಗಿದೆ. ರೈತ ಸಂತೃಪ್ತಿಯಿಂದ ಇದ್ದರೆ ದೇಶ ಸಮೃದ್ದಿಯಾಗಿರುತ್ತದೆ.

ಆದರೆ ರೈತರ ಜಮೀನನ್ನೇ ಕಸಿದುಕೊಂಡು ವಕ್ಫ್ ಆಸ್ತಿ ಮಾಡಲು ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಇದಕ್ಕೆ ಸರಿಯಾದ ಕಡಿವಾಣ ಹಾಕಬೇಕು. ಆ ದಿಕ್ಕಿನಲ್ಲಿ ಆಡಳಿತ ನಡೆಸುವವರಿಗೆ ಬುದ್ದಿ ಕೊಡಮ್ಮ ಎಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

ರಾಜ್ಯದ, ದೇಶದ ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ಭಕ್ತರ ಸಂಖ್ಯೆ ಕೋಟಿ ಕೋಟಿ ದಾಟುತ್ತಿದೆ. ಇದರ ಅರ್ಥ ದೇಶದಲ್ಲಿ ಧರ್ಮವನ್ನು ಉಳಿಸುತ್ತೇವೆ ಎಂದು ತೀರ್ಮಾನ ಮಾಡಿಕೊಂಡಿರುವವರ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿರುವ ತುಂಬಾ ಸಂತೋಷ. ಎಂಥ ಸಣ್ಣ ದೇವಸ್ಥಾನದಲ್ಲಿ ಆಡಳಿತ ನಡೆಸುತ್ತಿರುವವರೂ ಅನ್ನಸಂತರ್ಪಣೆ ಮಾಡಿ ಜನರನ್ನು, ಭಕ್ತರನ್ನು ತೃಪ್ತಿ ಪಡಿಸುತ್ತಿರುವುದು ಈ ದೇಶದ ಸೌಭಾಗ್ಯ ಎಂದರು.

ಧರ್ಮ ಜಾಗೃತಿಯಾದಂತಹ ತಾಯಿ ಇನ್ನೂ ನಮಗೆ ಆಶೀರ್ವಾದ ಮಾಡಲಿ. ರಾಜಕೀಯ ಗೊಂದಲಗಳು ನಿವಾರಣೆ ಆಗಲಿ. ರೈತರು ಜಮೀನು ವಕ್ಫ್ ಮಂಡಳಿಗಳಿಂದ ರೈತರಿಗೇ ಸಿಗುವ ರೀತಿಯಲ್ಲಿ ಆಶೀರ್ವಾದ ಮಾಡಲಿ. ಸಂತೋಷದಿಂದ ಎಲ್ಲರೂ ಬದುಕು ರೀತಿಯಲ್ಲಿ ಆಶೀರ್ವಾದ ಮಾಡಮ್ಮ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಬೇಗ ಎಲ್ಲಾ ಸಮಸ್ಯೆಗಳು ಪರಿಹಾರ ಆಗಲಿ ಎಂಬ ವಿಶ್ವಾಸದಲ್ಲಿ ನಾನೀದ್ದೇನೆ ಎಂದರು.