ಹಾಸನ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಅಡವಿಟ್ಟಿದ್ದಾರೆ, ಅವಿಶ್ವಾಸದ‌ ಸೋಲು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಆದ ಮುಖಭಂಗವೇ ಹೊರತು ನನಗಲ್ಲ: ಎಚ್.ಡಿ.ರೇವಣ್ಣ ವಾಗ್ದಾಳಿ

ಹಾಸನ:  ನಗರಸಭೆ ಅಧ್ಯಕ್ಷರ ವಿರುದ್ಧ ಜೆಡಿಎಸ್ ಕೈಗೊಂಡಿದ್ದ ಅವಿಶ್ವಾಸ ನಿರ್ಣಯ ಸೋಲು ಕಂಡ ಹಿನ್ನೆಲೆಯಲ್ಲಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅವಿಶ್ವಾಸ ನಿರ್ಣಯವನ್ನು ನಾವು ಮುಸ್ಲಿಂ ಸಮುದಾಯದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡುವ ಉದ್ದೇಶದಿಂದಲೇ ತಂದೆವು. ಈಗಿನ ಅಧ್ಯಕ್ಷ  ತನ್ನ ಚುನಾವಣೆ ವೇಳೆ ಮೂರು ತಿಂಗಳಲ್ಲಿ ಅಧಿಕಾರ ತ್ಯಜಿಸುವ ಭರವಸೆ ನೀಡಿದ್ದ. ಇಲ್ಲ‌ ಎಂದಾದರೆ ಹಾಸನಾಂಬೆ ದೇವಿಯ ಮುಂದೆ ಆಣೆ ಮಾಡಲಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇದರಲ್ಲಿ ನನಗೆ ಯಾವುದೇ ಮುಖಭಂಗವಿಲ್ಲ, ಮುಖಭಂಗವಾಗಿದ್ದು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ,” ಎಂದ ರೇವಣ್ಣ, “ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಯ ಉದ್ದೇಶಗಳನ್ನು ಬಯಲಿಗೆಳೆದಿವೆ,” ಎಂದರು.

“ಬಿಜೆಪಿ ಮತ್ತು ಕಾಂಗ್ರೆಸ್ ಒಂದುಗೂಡಿ ಪ್ರಾದೇಶಿಕ ಪಕ್ಷದ ಮೇಲೆ ದಾಳಿ ಮಾಡುತ್ತಿವೆ. ಆದರೆ ನಾವು ಈ ಸವಾಲನ್ನು ಸ್ವೀಕರಿಸಿದ್ದೇವೆ. ನಮ್ಮ ಸದಸ್ಯರು ಪಕ್ಷದ ಗೌರವ ಉಳಿಸಿದ್ದಾರೆ. ಅವರೊಂದಿಗೆ ನಾನು ಇರುತ್ತೇನೆ ಎಂದರು.

ಅಧ್ಯಕ್ಷ ಚಂದ್ರೇಗೌಡ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ರೇವಣ್ಣ,  ಆ ಅಧ್ಯಕ್ಷನಿಗೆ ಮಾನ-ಮರ್ಯಾದೆ ಇದೆಯಾ? “ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಅಧ್ಯಕ್ಷರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಎಷ್ಟು ದಿನ ಇರುತ್ತಾನೆ, ಮೂರೂ ಜನ ಅದೇನು ಕಡಿದು ಕಟ್ಟೆ ಹಾಕುತ್ತಾರೆ ನೋಡೋಣ,” ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.

“ನಾನು ಮೂವತ್ತು ವರ್ಷ ರಾಜಕಾರಣದಲ್ಲಿ ಇದ್ದೇನೆ, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯನ್ನು ಅಡವಿರಿಸಿದ್ದಾರೆ. ಇಂತಹ ಪ್ರಕರಣಗಳನ್ನು ಹಲವಾರು ಬಾರಿ ಕಂಡಿದ್ದೇನೆ. ಇದು ನನ್ನ ರಾಜಕೀಯ ಹಿನ್ನಡೆ ಅಲ್ಲ, ಬುನಾದಿ,” ಎಂದು ತಮ್ಮ ನಿಲುವು ವ್ಯಕ್ತಪಡಿಸಿದರು.

ಇದೇ ಸಂದರ್ಭ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಉಗ್ರವಾಗಿ ಖಂಡಿಸಿದ ರೇವಣ್ಣ, “ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡಬೇಕು. ಅಲ್ಲಿ ಕೆಲವರು ಅಪರಾಧ ಮಾಡಿದರೆ, ಇಲ್ಲಿ ಇರುವ ಸಮುದಾಯವನ್ನು ದೋಷಿ ಎಂದು ಪರಿಗಣಿಸುವುದು ಸರಿಯಲ್ಲ,” ಎಂದರು.