ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ, ಕಾಂಗ್ರೆಸ್ ಹಾಗೂ ಸಂಸದ ಶ್ರೇಯಸ್ಪಟೇಲ್ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇಂದು ನಡೆಯಲಿರುವ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಿನ್ನೆ ರಾತ್ರಿ ಜೆಡಿಎಸ್ ಮುಖಂಡರು ಆಯೋಜಿಸಿದ್ದ ಆರ್ಕೆಸ್ಟ್ರಾ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಮಸಮುದ್ರಕ್ಕೆ ಎಷ್ಟು ಮನೆ ಕಟ್ಟುಸ್ದೆ, ಎಷ್ಟು ದೇವಸ್ಥಾನ ಕಟ್ಟಿಸಿದೆ? ಸುಮಾರು ಮುನ್ನೂರರಿಂದ ನಾಲ್ಕನೂರು ದೇವಸ್ಥಾನ ಕಟ್ಟಿಸಿದೆ. ಇರಲಿ ಅದು, ಯಾರೂ ಏನು ಹೆದರಬೇಕಿಲ್ಲ. ದೇವೇಗೌಡರು, ರೇವಣ್ಣ ಅವರದ್ದು ಮುಗಿದೇ ಹೋಯಿತು ಅಂತ ತಿಳ್ಕಂಡಿದ್ದರೆ ಅದು ಕನಸು ಎಂದು ಗುಡುಗಿದರು.
ನಮ್ಮ ಕಾರ್ಯಕರ್ತರು ಯಾರಿಗೂ ಹೆದರಬೇಕಿಲ್ಲ ಧೈರ್ಯವಾಗಿರಿ. ಯಾರಾದರೂ ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರೆ ಬೇರೆ ಥರ ಆಗುತ್ತೆ. ಇಲ್ಲಿ ನ್ಯಾಯವಾಗಿ ಇರಬೇಕು, ಓಟು ಯಾರಿಗಾದರೂ ಹಾಕಿಕೊಳ್ಳಿ ನನಗೆ ಸಂಬಂಧವಿಲ್ಲ ಎಂದರು.
ಊರು ನೆಮ್ಮದಿಯಾಗಿರಬೇಕು ಅಷ್ಟೇ. ನಮ್ಮ ರಕ್ಷಣಾ ಇಲಾಖೆಯವರಿಗೆ ಹೇಳುವುದು ಇಷ್ಟೇ, ಯಾವ ಪಾರ್ಟಿಯಾವರಾಗಲಿ ಊರು ನೆಮ್ಮದಿಯಾಗಿ ಇಡಿ. ಚುನಾವಣೆ ಬಂದಾಗ ನನ್ನ ಹಣೆ ಮೇಲೆ ಏನು ಬರೆದಿರುತ್ತೋ ಅದನ್ನು ಯಾರೂ ತಪ್ಪಿಸಲು ಆಗಲ್ಲ.
ಇವತ್ತು ನನ್ನ ರಾಜಕೀಯ ಮುಗಿದೆ ಹೋಯಿತು ಎಂದು ತಿಳಿದುಕೊಂಡಿದ್ದಾರೆ. ನಾನು ಶಾಸನನಾಗಿ ಮೂವತ್ತು ವರ್ಷ ಆಯ್ತು. ಯಾರ್ಯಾರು ಹೆಂಗೆ ಅಂತ ಗೊತ್ತಿದೆ. ಈ ಊರಿಗೆ ಯಾರಾದರೂ ಹತ್ತು ರೂಪಾಯಿ ಕೆಲಸ ಮಾಡಿದ್ರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.
ಚುನಾವಣೆ ಬಂದಾಗ ಐತೆ, ಚುನಾವಣೆ ಎದುರಿಸೋಣ. ರಾಜಕಾರಣ ಒಂದು ಕಡೆ ಬಿಟ್ಟಾಕಿ, ಊರು ನೆಮ್ಮದಿಯಾಗಿ ಇಟ್ಕಳಿ. ಉಳಿದಿದ್ದು ನಮಗೆ ಬಿಡಿ, ನಾನು ಕೆಲಸ ಮಾಡ್ತಿನಿ. ರಂಗನಾಥಸ್ವಾಮಿ, ಲಕ್ಷೀವೆಂಕಟರಮಣ ಸ್ವಾಮಿ ನಂಬಿದವರು ಯಾರೂ ಕೆಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ಇದೇ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತ್ಯೇಕ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಿರುವುದು ಹೊಳೆನರಸೀಪುರ ಕ್ಷೇತ್ರದಲ್ಲಿನ ಜಿದ್ದಾಜಿದ್ದಿನ ರಾಜಕೀಯಕ್ಕೆ ಸಾಕ್ಷಿಯಾಗಿದೆ.