ಹಾಸನ, ಮೇ 02, 2025: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಡಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಲೇಶಪುರ ತಾಲ್ಲೂಕಿನ ಬೈಕೆರೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಯಾವುದೇ ಜಾತಿ, ಮತ, ಪಂಥದ ಆಧಾರದಲ್ಲಿ ರಿಯಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು
“ಯಾರೇ ಕೊಲೆ, ಸುಲಿಗೆ, ದರೋಡೆಯಲ್ಲಿ ಭಾಗಿಯಾಗಿದ್ದರೂ ಅವರನ್ನು ಕ್ರಿಮಿನಲ್ಗಳೆಂದೇ ಪರಿಗಣಿಸಲಾಗುವುದು. ಇಂತಹ ದುಷ್ಕೃತ್ಯಗಳಿಗೆ ಯಾವುದೇ ಜಾತಿ, ಮತದ ಪ್ರಶ್ನೆ ಬರುವುದಿಲ್ಲ. ಅವರೆಲ್ಲೆ ಇದ್ದರೂ ಪೊಲೀಸರು ಹುಡುಕಿ, ಉಗ್ರ ಶಿಕ್ಷೆ ವಿಧಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ. ಗುಂಪು ಹಲ್ಲೆ ಸೇರಿದಂತೆ ಯಾವುದೇ ಅಪರಾಧದಲ್ಲಿ ಭಾಗಿಯಾದವರಿಗೂ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಖಚಿತ,” ಎಂದು ಸಚಿವ ಖಂಡ್ರೆ ಹೇಳಿದರು.
ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಅವರು ಒತ್ತಿ ಹೇಳಿದರು.
ಬಿಜೆಪಿಯ ಆರೋಪಕ್ಕೆ ತಿರುಗೇಟು:
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಸಚಿವ ಖಂಡ್ರೆ ತಳ್ಳಿಹಾಕಿದರು. “ಇದು ಸಂಪೂರ್ಣ ಸುಳ್ಳು. ಸತ್ಯವನ್ನು ತಿರುಚಿ ಬಿಂಬಿಸುವ ರೀತಿಯಲ್ಲಿ ಈ ಆರೋಪಗಳು ಮಾಡಲಾಗುತ್ತಿವೆ. ಕಂದಾಹಾರ್ ವಿಮಾನ ಅಪಹರಣ, ಸಂಸತ್ ದಾಳಿ, ಅಕ್ಷರಧಾಮ ದೇವಸ್ಥಾನದ ಮೇಲಿನ ದಾಳಿ, ಕಾರ್ಗಿಲ್ ಯುದ್ಧದಲ್ಲಿ 700 ಸೈನಿಕರ ಹುತಾತ್ಮ, ಪುಲ್ವಾಮಾ ದಾಳಿ–ಇವೆಲ್ಲವೂ ಯಾವ ಸರ್ಕಾರದ ಕಾಲದಲ್ಲಿ ನಡೆದವು? ಕಾಂಗ್ರೆಸ್ ಆಡಳಿತದಲ್ಲಿರುವಾಗ ಇಂತಹ ಘಟನೆಗಳು ನಡೆದಿಲ್ಲ,” ಎಂದು ತಿರುಗೇಟು ನೀಡಿದರು.
ಜಾತಿ-ಧರ್ಮಗಳ ನಡುವೆ ಘರ್ಷಣೆ ಉಂಟುಮಾಡುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ ಖಂಡ್ರೆ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಂತಿ ಮತ್ತು ಸಹಬಾಳ್ವೆಯ ವಾತಾವರಣವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕಾನೂನಿನ ಕಠಿಣ ಕ್ರಮಕ್ಕೆ ಒತ್ತು:
ಸುಹಾಸ್ ಶೆಟ್ಡಿಯ ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಕಾನೂನಿನ ಕರಾಳ ಕೈಗಳಿಗೆ ಒಪ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
“ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಘಟನೆಯ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಸರ್ಕಾರದ ಆದ್ಯತೆ,” ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡದಲ್ಲಿ ಶಾಂತಿಗೆ ಕರೆ:
ದಕ್ಷಿಣ ಕನ್ನಡ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಖಂಡ್ರೆ ಹೇಳಿದರು. ಈ ಘಟನೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗದಂತೆ ಮನವಿ ಮಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.