ಹಾಸನ: ಉರಿದವರು ಬೂದಿಯಾಗಲೇಬೇಕು, ಉರಿದವರು ಒಂದಲ್ಲ ಒಂದು ದಿನ ನಾಶ ಆಗುತ್ತಾರೆ ಎನ್ನುವುದಕ್ಕೆ ನಟ ದರ್ಶನ್ ಉದಾಹರಣೆಯಾಗಿದ್ದಾರೆ. ಇವರನ್ನು ಚಲನಚಿತ್ರ ಮಂಡಳಿಯಿಂದ ಹೊರದಬ್ಬಬೇಕು ಹಾಗೂ ಇವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು.
ಅವರು ಮಾಡಿರುವ ಘೋರ ಅಪರಾಧಗಳನ್ನು ನಾವೆಲ್ಲರೂ ಖಂಡಿಸಲೇಬೇಕು. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಸಿನಿಮಾ ಶೈಲಿಯಲ್ಲಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ. ಆ ನಟ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯಬೇಕಿತ್ತು. ಮೇರುನಟ ಎಂದು ಹೆಸರು ಪಡೆದಿದ್ದ ದರ್ಶನ್ ಹಾಗೂ ಪಟಾಲಂ ಕೊಲೆ ಮಾಡಿರುವುದು ನೋಡಿ ದಿಗ್ಭ್ರಮೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಂತಹವರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಣ, ಹೆಸರು ಗಳಿಸಿ ಇಂತಹ ಕೃತ್ಯ ಮಾಡಿರುವುದು ದುರದೃಷ್ಟಕರ. ಹಿಂದೆ ಆರೋಪಿಗಳು ಹಣದಿಂದ ಇಂತಹ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಇದು ಕಾನೂನಿನ ದೌರ್ಬಲ್ಯವೋ ಎನ್ನುವುದು ಗೊತ್ತಿಲ್ಲ.ಆದರೆ ಈಗ ರಣರೋಚಕ ದುರ್ಘಟನೆ ನಡೆದಿದೆ. ಸೆಲೆಬ್ರಿಟಿಗಳು ಪ್ರಖ್ಯಾತರಾಗಬೇಕು ಆದರೆ ಕುಖ್ಯಾತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇರುನಟ, ಯುವ ರಾಜಕಾರಣಿ ಕೊಲೆ, ಅತ್ಯಾಚಾರದಲ್ಲಿ ಭಾಗಿಯಾಗಿರುವುದು ಕನ್ನಡ ನಾಡಿಗೆ ಶೋಭೆ ತರಲ್ಲ.ಈ ಪ್ರಕರಣ ನಾಡಿನ ಸಂಸ್ಕೃತಿಗೆ ದೊಡ್ಡ ಪೆಟ್ಟು.ಇದು ರಾಜ್ಯಕ್ಕೆ ತಂದಿರುವ ದೊಡ್ಡ ಕಳಂಕ. ಚಲನಚಿತ್ರ ವಾಣಿಜ್ಯ ಮಂಡಳಿ, ಇತರೆ ಸಂಘಗಳಿರಬಹುದು ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದರ್ಶನ್ ಹಿಂದೆ ಇಂತಹ ಹತ್ತಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಗ ಅವರ ಮೇಲೆ ಕಠಿಣ ಕ್ರಮ ಆಗಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಕಾನೂನಿನ ಕುಣಿಕೆ ಬಿಗಿ ಇಲ್ಲ. ಹಿಂದಿನ ಮೇರು ನಟರು ಮದ್ಯ ಸೇವಿಸುವುದು, ಸಿಗರೇಟ್ ಸೇದುವ ದೃಶ್ಯಗಳಲ್ಲಿ ನಟಿಸುವುದಿಲ್ಲ, ಆ ದೃಶ್ಯ ತೆಗೆಯಿರಿ ಎನ್ನುತ್ತಿದ್ದರು. ಅವರೆಲ್ಲಿ? ಇವರೆಲ್ಲಿ? ಇದನ್ನು ಉಗ್ರ ಪದಗಳಲ್ಲಿ ಖಂಡಿಸುತ್ತೇನೆ ಎಂದರು.
ದರ್ಶನ್ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು. ಹಿಂದೆ ಹಲವು ದೇಶದ್ರೋಹ, ಖೋಟಾ ನೋಟ ಮುದ್ರಣದಂತಹ ಪ್ರಕರಣಗಳು ಖುಲಾಸೆಯಾಗಿವೆ. ಸರ್ಕಾರ ಮತ್ತು ಇಲಾಖೆಗಳು ಕಾನೂನು ಕ್ರಮದ ಜೊತೆಗೆ ಎಷ್ಟು ಜನಕ್ಕೆ ಶಿಕ್ಷೆಯಾಯ್ತು ಅನ್ನುವುದನ್ನು ಗಮನಿಸಬೇಕು ಎಂದು ಒತ್ತಾಯಿಸಿದರು.
ಹಣದ ಮುಂದೆ ಕಾನೂನು ಮೂಕವಾಗುತ್ತಿದೆ.
ದುಡ್ಡಿನಿಂದ ಶಿಕ್ಷೆಯಿಂದ ತಪ್ಪಿಸುವ ಸಂದರ್ಭಗಳೇ ಹೆಚ್ಚಿವೆ. ಇಂತಹ ಕೆಟ್ಟ ಹುಳುಗಳು, ಮಾಫಿಯಾಗಳ ನಿಯಂತ್ರಣ ಆಗಬೇಕು. ಆದರೆ ಅವರೇ ಸರ್ಕಾರವನ್ನು ನಿಯಂತ್ರಣ ಮಾಡುತ್ತಿದ್ದಾರೆ.
ಹಿಂದೆ ಇವರ ಮೇಲೆ ಬಂದಿದ್ದ ಪ್ರಕರಣಗಳಲ್ಲಿ ಕಠಿಣ ಕ್ರಮ ಆಗಲಿಲ್ಲ. ಹಾಗಾಗಿ ಇಂದು ಕೊಲೆಯ ಹಂತಕ್ಕೆ ಬಂದಿದೆ. ಈಗಲಾದರೂ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು. ಇಂತಹ ನಟರು ನಮ್ಮ ರೋಲ್ ಮಾಡೆಲ್ಗಳಲ್ಲ. ಇವರೆಲ್ಲ ಕುಖ್ಯಾತರು ಎಂದು ಹರಿಹಾಯ್ದರು.