ಹಾಸನ : ಬರ್ತ್ಡೇ ಕೇಕ್ ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕನೇ ಯಮಲೋಕ ಸೇರಿದ್ದಾನೆ.
ಸೆಲೆಬ್ರೇಷನ್ ನಂತರದ ಜಾಲಿ ರೈಡ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಬರ್ತಡೇ ಬಾಯ್ ಸೇರಿ ಇಬ್ಬರು ಯುವಕರು ದಾರುಣ ಸಾವು ಕಂಡು, ಮೂವರು ಗಾಯಗೊಂಡ ಘಟನೆ ತಾಲೂಕಿನ ಮಡೆನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಚನ್ನರಾಯಪಟ್ಟಣದ ರಕ್ಷಿತ್ (22), ಕುಶಾಲ್ (24) ಮೃತ ಯುವಕರು. ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಮಡೆನೂರು ಫ್ಲೈಓವರ್ ಮೇಲೆ ರಕ್ಷಿತ್ ಬರ್ತಡೇ ಸೆಲೆಬ್ರೇಷನ್ ಮಾಡಿದ ಗೆಳೆಯರು ಕಾರಿನಲ್ಲಿ ಹಾಸನದ ಕಡೆಗೆ ಜಾಲಿ ರೈಡ್ ಬರುತ್ತಿದ್ದರು.
ಅತಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಪೋಲ್ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಜಮೀನಿಗೆ ಹಾರಿ ಬಿದ್ದಿದೆ.
ಕಾರಿನ ಒಳಗೆ ಸಿಲುಕಿಕೊಂಡ ಎಲ್ಲರಿಗೂ ತೀವ್ರವಾಗಿ ಗಾಯಗೊಂಡರು. ರಕ್ಷಿತ್ ಸ್ಥಳದಲ್ಲೆ ಕೊನೆಯುಸಿರೆಳೆದರೆ, ಕುಶಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗಿರೀಶ್ ಎಂಬವರಿಗೆ ಸೇರಿದ ಕಾರನ್ನು ಬರ್ತಡೇ ಸೆಲೆಬ್ರೇಷನ್ ಗೆಂದು ಕುಶಾಲ್ ಎರವಲು ಪಡೆದುಕೊಂಡು ಬಂದಿದ್ದ.

ಡಿಕ್ಕಿ ಹಾಗೂ ಪಲ್ಟಿಯಾದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.