ಪತ್ರಿಕಾ ಅಕಾಡೆಮಿ ವೃತ್ತಿಪರವಾಗಿ ಕೆಲಸ ಮಾಡಲಿ; ಡಾ.ಶಿವಕುಮಾರ ಕಣಸೋಗಿ

ಬೆಂಗಳೂರು:ವೃತ್ತಿಪರವಾದ ಪತ್ರಕರ್ತರನ್ನು ಸಂಘಟಿಸಲು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಬದ್ದತೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ದಾವಣಗೆರೆ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಕಣಸೋಗಿ ಹೇಳಿದರು.

ಮಾಧ್ಯಮ ಅಕಾಡೆಮಿಗೆ ನೇಮಕಗೊಂಡಿರುವ ಸದಸ್ಯರಿಗೆ ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಗೈರಾಗಿದ್ದ ಸದಸ್ಯರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸನ್ಮಾನಿಸಿ ಮಾತನಾಡಿ, ಅಕಾಡೆಮಿ ವೃತ್ತಿಪರವಾಗಿ ಕೆಲಸವನ್ನು ಮಾಡಲಿ ಎಂದರು. ಅಧಿಕಾರಕ್ಕೆ ಯಾರು ಬರುತ್ತಾರೆ ಎನ್ನುವುದು ಮುಖ್ಯವಲ್ಲ. ಅಧಿಕಾರದ ಅವಧಿಯಲ್ಲಿ ಏನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎನ್ನುವುದು ಮುಖ್ಯ.

ಹಾಸನ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಿಂದಲೂ ತಗಡೂರು ಅವರನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ನೊಂದ ಪತ್ರಕರ್ತರ ಪರವಾಗಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಯು.ಎಸ್.ಶೆಣೈ ಮಾತನಾಡಿ, ಕೆಯುಡಬ್ಲೂೃಜೆ ಜೊತೆಗೆ ಸಂಬಂದ ಮೂರು ದಶಕಗಳಿಗೂ ಹಳೆಯದು. ಆಗಿನ ಕಾಲಘಟ್ಟಕ್ಕೆ ಹೋಲಿಸಿದರೆ, ಇಂದು ಸಂಘ ಅತ್ಯುತ್ತಮ ಕೆಲಸವನ್ನು ಮಾಡುತ್ತಾ ಪತ್ರಕರ್ತರ ಪರವಾಗಿ ನಿಂತಿರುವುದು ಅಭಿಮಾನದ ಸಂಗತಿ ಎಂದರು.

ಮಾಧ್ಯಮ ಅಕಾಡೆಮಿಯ ಸದಸ್ಯರಾದ ಅಹೋಬಲಪತಿ, ಗಂಗಾವತಿ ನಿಂಗಜ್ಜ ಅವರು ಮಾತನಾಡಿ, ಕೆಯುಡಬ್ಲೂೃಜೆಗೆ ಶಿವಾನಂದ ಅವರ ನೇತೃತ್ವದ ತಂಡ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಪತ್ರಕರ್ತರ ಸಮುದಾಯದಲ್ಲಿ ಭರವಸೆ ಮೂಡಿಸಿದೆ. ಇನ್ನಷ್ಟು ಉತ್ತಮ ಕೆಲಸಗಳು ಈ ಕಾಲವಾಧಿಯಲ್ಲಿ ಆಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿಗೆ ಸಮರ್ಥ ತಂಡವನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನೂತನ ಸದಸ್ಯರಾದ ದಾವಣಗೆರೆಯ ಮಂಜುನಾಥ್, ವಿಜಯಪುರದ ಸಂಗಮೇಶ ಚೂರಿ, ಕುಂದಾಪುರದ ಯು.ಸುರೇಂದ್ರ ಶೆಣೈ, ಚಿತ್ರದುರ್ಗದ ಅಹೋಬಲಪತಿ, ಗಂಗಾವತಿಯ ನಿಂಗಜ್ಜ ಅವರನ್ನು ಕೆಯುಡಬ್ಲೂೃಜೆ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ ಅವರು ಹಾಜರಿದ್ದರು.