ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: ಹಾಸನ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿ ದುರಂತ ಸಾವು

 ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2025ರ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಹಾಸನ ಮೂಲದ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ (20)  ಮೃತಪಟ್ಟಿದ್ದಾನೆ.

 ಬೇಲೂರು ತಾಲ್ಲೂಕಿನ ಕುಪ್ಪುಗೋಡು ಗ್ರಾಮದ ಡಿ.ಟಿ. ಲಕ್ಷ್ಮಣ್ ಮತ್ತು ಅಶ್ವಿನಿ ದಂಪತಿಯ ಏಕೈಕ ಪುತ್ರನಾಗಿದ್ದ ಭೂಮಿಕ್.

ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಕುಟುಂಬವು ಸಣ್ಣ ಕೈಗಾರಿಕೆ ನಡೆಸುತ್ತಿದೆ. ಇಂದು ಕಾಲೇಜಿಗೆ ತೆರಳಿದ್ದ ಭೂಮಿಕ್, ಸ್ನೇಹಿತರೊಂದಿಗೆ ಸ್ಟೇಡಿಯಂಗೆ ಭೇಟಿ ನೀಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಾವಿರಾರು ಜನರು ಆರ್‌ಸಿಬಿ ತಂಡವನ್ನು ಕಾಣಲು ಗೇಟ್‌ಗಳತ್ತ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ ಮತ್ತು 33ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕುಪ್ಪುಗೋಡು ಗ್ರಾಮದಲ್ಲಿ ಜಮೀನು ಹೊಂದಿರುವ ಡಿ.ಟಿ. ಲಕ್ಷ್ಮಣ್ ಕುಟುಂಬವು ಆಗಾಗ ಗ್ರಾಮಕ್ಕೆ ಭೇಟಿ ನೀಡುತ್ತಿತ್ತು. ಭೂಮಿಕ್‌ನ ಸಾವು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ, ಜೊತೆಗೆ ಈ ಲೋಪದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.