ಹಾಸನ, ಏಪ್ರಿಲ್ 27: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಪ್ರವಾಸಿಗಳ ನರಮೇಧ ಸಂಭವಿಸಿದ ಘಟನೆಯಲ್ಲಿ, ಹೊಳೆನರಸೀಪುರ ಪಟ್ಟಣದ ನಿವಾಸಿ ಅತ್ರಿ ಪ್ರಭಾಕರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ನಿನ್ನೆ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
.ಪ್ರವಾಸದ ಉದ್ದೇಶದಿಂದ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಅತ್ರಿ ಪ್ರಭಾಕರ್, ಪಹಲ್ಗಾಮ್ನಲ್ಲಿ ಕೆಲಕಾಲ ವಿಹಾರ ಮಾಡಿದ್ದರು. ಆದರೆ, ಉಗ್ರರ ದಾಳಿಗೆ ಕೆಲವೇ ನಿಮಿಷಗಳ ಮುನ್ನ ಅವರು ಆ ಸ್ಥಳದಿಂದ ಹೊರಟಿದ್ದರು. ಈ ಕಾರಣದಿಂದ ಅವರು ಭೀಕರ ದಾಳಿಯಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡಿದ್ದಾರೆ.
ದಾಳಿಯ ನಂತರ ಸುರಕ್ಷಿತವಾಗಿ ಹಾಸನಕ್ಕೆ ವಾಪಾಸಾದ ಅತ್ರಿ ಪ್ರಭಾಕರ್, ತಮ್ಮ ಅನುಭವ ತೆರೆದಿಟ್ಟಿದ್ದಾರೆ. “ನಾನು ಕೆಲವೇ ನಿಮಿಷಗಳ ಹಿಂದೆ ಆ ಸ್ಥಳವನ್ನು ಬಿಟ್ಟು ಹೊರಟಿದ್ದೆ. ಅದು ನನ್ನ ಜೀವ ಉಳಿಸಿತು,” ಎಂದು ಅವರು ಭಾವುಕರಾಗಿ ಹೇಳಿದರು.