ಶಿರಾಡಿಘಾಟ್ ನಲ್ಲಿ ಪುನಃ ಭಾರಿ ಗುಡ್ಡಕುಸಿತ; ಕಂಟೈನರ್ ಪಲ್ಟಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್

ಹಾಸನ: ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಪಲೆ ಬಳಿ ಭಾರಿ ಪ್ರಮಾಣದಲ್ಲಿ ಪುನಃ ಗುಡ್ಡಕುಸಿತ ಸಂಭವಿಸಿದ್ದು, ಒಂದು ಕಂಟೈನರ್ ಪಲ್ಟಿಯಾಗಿದೆ. ಹಲವು ವಾಹನಗಳು‌ ಮಣ್ಣಿನಲ್ಲಿ ಸಿಲುಕಿವೆ.

ಮಲೆನಾಡು ಭಾಗದಲ್ಲಿ ಮತ್ತೆ ಬಿರುಸಿನ ಮಳೆ ಆರಂಭ ಆಗುತ್ತಿರುವುದರಿಂದ ಮತ್ತೆ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ರಸ್ತೆ ಮೇಲೆ ಕುಸಿದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದೆ. ಮಣ್ಣಿನಡಿ ಮತ್ತೊಂದು ಬೃಹತ್ ಗಾತ್ರದ ಕಂಟೇನರ್ ಹಾಗೂ ಇತರ ವಾಹನಗಳು‌ ಸಿಲುಕಿದ್ದು, ಪಲ್ಟಿಯಾದ ಕಂಟೇನರ್‌ನಲ್ಲಿ ಸಿಲುಕಿರುವ ಚಾಲಕನನ್ನು ರಕ್ಷಿಸಲಾಗಿದೆ.

ಇಂದು ಬೆಳಿಗ್ಗೆ ಇದೇ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದರು. ಸಂಜೆ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತದಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರ ಬಂದ್ ಆಗಿದೆ. ಇದರಿಂದ ನೂರಾರು ವಾಹನಗಳು ಶಿರಾಡಿಘಾಟ್ ರಸ್ತೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.