BREAKING NEWS: ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ: ತುಳಿದು ಹೊಸಕಿ ಬರ್ಬರವಾಗಿ ಕೊಂದ ಆನೆ

ಸಕಲೇಶಪುರ: ಕಾಡಾನೆ ದಾಳಿಗೆ ತಾಲೂಕಿನಲ್ಲಿ ಮತ್ತೊಂದು ಜೀವ ಇಂದು ಬಲಿಯಾಗಿದೆ.

ತಾಲೂಕಿನ ಬೈಕೆರೆ ಗ್ರಾಮದ ಕಾಫಿ ಬೆಳೆಗಾರ ಅಮೃತೇಶ್ ಅವರ ಪುತ್ರ ಷಣ್ಮುಖ (36) ಮೃತ ವ್ಯಕ್ತಿ.

ಆನೆ ತುಳಿತಕ್ಕೊಳಗಾಗಿ ಮೃತಪಟ್ಟಿರುವ ಷಣ್ಮುಖ ಅವರ ಶವ ತೋಟದಲ್ಲಿ ಪತ್ತೆಯಾಗಿದೆ.

ಕಳೆದ ಕೆಲದಿನಗಳಿಂದ ಗ್ರಾಮದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿದ್ದರಿಂದ ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳ ಓಡಾಟ ಕಂಡುಬಂದಿಲ್ಲ ಹೀಗಾಗಿ ಇಂದು ಕೆಲಸ ಮಾಡಿಕೊಳ್ಳಿ ಎಂದು ಸೂಚಿಸಿದ್ದರು.

ಅದರಂತೆ ಷಣ್ಮುಖ ಅವರು ಇಂದು ಕಾರ್ಮಿಕರೊಂದಿಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ದಿಡೀರನೆ ತೋಟದೊಳಗೆ ನುಗ್ಗಿದ ಕಾಡಾನೆಯೊಂದು ಷಣ್ಮುಖ ಅವರನ್ನು ತುಳಿದು ಬರ್ಬರವಾಗಿ ಹತ್ಯೆ ಮಾಡಿದೆ.

ಬೆಳಗ್ಗೆ ಕಾಫಿ ತೋಟಕ್ಕೆ ತೆರಳಿದ್ದ ಷಣ್ಮುಖ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಬಾರದ್ದರಿಂದ ಕುಟುಂಬದ ಸದಸ್ಯರು ಅವರನ್ನು ಹುಡುಕಿಕೊಂಡು ಹೋದಾಗ ಅವರ ಶವ ಪತ್ತೆಯಾಗಿದೆ.

ಘಟನೆಯಿಂದ ಬೈಕೆರೆ ಭಾಗದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದ್ದು ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತಗೊಂಡಿದೆ.