ಕಚ್ಚಿದ ಹಾವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ ಭೂಪ!

ಹಾಸನ: ಕೃಷಿ ಕಾರ್ಮಿಕನೊಬ್ಬ ತನಗೆ ಕಚ್ಚಿದ‌ ಕೊಳಕು ಮಂಡಲ ಹಾವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಆಗಮಿಸಿ ವೈದ್ಯರು ಬೆಚ್ಚಿ ಬೀಳುವಂತೆ ಮಾಡಿದ್ದಾನೆ.

ಬೇಲೂರು ತಾಲ್ಲೂಕಿನ ಹಾರೋಹಳ್ಳಿ ಗಡಿ ಬಳಿ ಮೆಕ್ಕೆಜೋಳ ಕಟಾವು ಮಾಡುವಾಗ ಕೊಳಕು ಮಂಡಲದ ಹಾವು ಕಚ್ಚಿದೆ.

ಹಾವೇರಿ ಮೂಲದ ಮುತ್ತು (40) ಎಂಬ ರೈತ ಕೊಳಕು‌ಮಂಡಲ ಹಾವಿನ‌ ಕಡಿತಕ್ಕೆ ಒಳಗಾಗಿದ್ದಾನೆ.

ಮುತ್ತು ಹೊಲದಲ್ಲಿ ಮೆಕ್ಕೆಜೋಳ ಕಟಾವು ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ. ತಕ್ಷಣವೇ ಆತ ಹಾವನ್ನು ಹಿಡಿದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಧಾವಿಸಿದ್ದಾನೆ.

ಅಸ್ಪತ್ರೆಗೆ ಹಾವು ಹಿಡಿದುಕೊಂಡು ಬಂದಿದ್ದ ಮುತ್ತುವನ್ನು ನೋಡಿ ಸಿಬ್ಬಂದಿ ಬೆಚ್ಚಿಬಿದ್ದರು. ವೈದ್ಯೆ ಡಾ. ಸುಧಾ ಮುತ್ತುವಿಗೆ ತಕ್ಷಣ ಚಿಕಿತ್ಸೆ ನೀಡಿದರು. ಮುತ್ತು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.