ಹಾಸನ: ಸಿನಿಮೀಯವಾಗಿ ವಾಹನ ಪಂಕ್ಚರ್ ಮಾಡಿ, ಚಾಲಕನನ್ನು ಕೆಳಗಿಳಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಂಜುಂಡೇಗೌಡ (ಲೋಕೇಶ್) (44) ಕೊಲೆಯಾದ ವ್ಯಕ್ತಿ.
ಹೈನುಗಾರರಿಂದ ಹಾಲು ಸಂಗ್ರಹ ಮಾಡಿಕೊಂಡು ಡೇರಿಗೆ ಹಾಲು ಹಾಕಲು ಮಹೀಂದ್ರ ಜಿತೋ ವಾಹನದಲ್ಲಿ ತೆರಳುತ್ತಿದ್ದ ನಂಜುಂಡೇಗೌಡ ಅವರ ರಸ್ತೆಯಲ್ಲಿ ದುಷ್ಕರ್ಮಿಗಳು ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಚರ್ ಮಾಡಿದ್ದಾರೆ.

ಮರುವನಹಳ್ಳಿ-ಮಡಬ ರಸ್ತೆಯಲ್ಲಿ ವಾಹನ ಪಂಕ್ಚರ್ ಆದ ಕೂಡಲೇ ಕೆಳಗಿಳಿದ ನಂಜುಂಡೇಗೌಡ ಅವರನ್ನು ಕೊಲೆಗಡುಕರು ಲಾಂಗ್ಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.
ತಲೆ, ಕುತ್ತಿಗೆ, ಕೈ ಕತ್ತರಿಸಿ ಹಾಕಿರುವ ದುರುಳರು, ಕೃತ್ಯಕ್ಕೆ ಬಳಸಿದ ಲಾಂಗ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.