ಹಾಸನ, ಏಪ್ರಿಲ್ 25: ನಗರದ ಶಂಕರಮಠ ರಸ್ತೆಯಲ್ಲಿರುವ ಎಸ್ಎಸ್ಎಂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಸಾವನ್ನಪ್ಪಿರುವ ಆರೋಪ ಕೇಳಿಬಂದಿದ್ದು, ಮೃತನ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿರುವುದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿ ಗ್ರಾಮದ 22 ವರ್ಷದ ಧರಣಿ ಮೃತಪಟ್ಟ ಯುವಕ.
ಧರಣಿ ಅವರಿಗೆ ತಲೆಯಲ್ಲಿ ನೀರು ತುಂಬಿಕೊಂಡಿರುವುದಾಗಿ ಗೊತ್ತಾಗಿದ್ದರಿಂದ, ಪೋಷಕರು ಅವರನ್ನು ಎಸ್ಎಸ್ಎಂ ಆಸ್ಪತ್ರೆಗೆ ಕರೆತಂದಿದ್ದರು. ಡಾ. ವಿನಾಯಕ್ ಮತ್ತು ಅವರ ತಂಡ ಐಸಿಯುನಲ್ಲಿ ಸುಮಾರು ಒಂದು ಗಂಟೆ ಚಿಕಿತ್ಸೆ ನೀಡಿದ ಬಳಿಕ ಧರಣಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ವೈದ್ಯರು ಈ ವಿಷಯವನ್ನು ಪೋಷಕರಿಗೆ ತಿಳಿಸದೆ, ಯುವಕನನ್ನು ಬೆಂಗಳೂರಿಗೆ ಶಿಫ್ಟ್ ಮಾಡುವುದಾಗಿ ಹೇಳಿ, ಮೃತದೇಹವನ್ನು ಅಂಬ್ಯುಲೆನ್ಸ್ಗೆ ಕೊಂಡೊಯ್ದು ಚಿಕಿತ್ಸೆ ನೀಡುತ್ತಿರುವಂತೆ ನಾಟಕವಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ನಾಟಕಕ್ಕೆ ಪೊಲೀಸ್ ಸಿಬ್ಬಂದಿಯೂ ಸಹಕಾರ ನೀಡಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಧರಣಿಯ ಪೋಷಕರು ಮತ್ತು ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.