ಸಕಲೇಶಪುರ, ಫೆಬ್ರವರಿ 11: ರಾಷ್ಟ್ರೀಯ ಹೆದ್ದಾರಿ 75ರ ಬಾಳ್ಳುಪೇಟೆ ಬಳಿಯ ನಿಡನೂರಿನಲ್ಲಿ ಇಂದು ಮುಂಜಾನೆ ತಮಿಳುನಾಡಿನ ವಲಸೆ ಕಾರ್ಮಿಕರಿದ್ದ ಟಾಟಾ ವಿಂಗರ್ ವಾಹನ ಪಲ್ಟಿಯಾಗಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಒಟ್ಟು 14 ಜನರು ಅಪಾಯದಿಂದ ಪಾರಾಗಿದ್ದಾರೆ.
ತಮಿಳುನಾಡಿನ ಸೇಲಂನಿಂದ ಕೊಡಗಿನ ಶನಿವಾರಸಂತೆಯ ಬಳಿ ಇರುವ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನವು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕೂಲಿ ಕಾರ್ಮಿಕರ ಬಟ್ಟೆ, ಆಹಾರ ಸಾಮಗ್ರಿಗಳು ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದವು.
ಸ್ಥಳೀಯರು, ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ತಕ್ಷಣ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ವಾಹನದ ತೀವ್ರ ವೇಗವೇ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಇಲಾಖೆ ಭೇಟಿ ನೀಡಿ, ಪ್ರರಿಶೀಲಿಸಿದ್ದಾರೆ.