ಹಾಸನ: ಸಕಾಲಕ್ಕೆ ಚಿಕಿತ್ಸೆ ದೊರಕದೆ ಮಾರಕ ಡೆಂಗ್ಯೂ ಜ್ವರಕ್ಕೆ ಶಾಲಾ ಬಾಲಕಿಯೊಬ್ಬಳು ಬಲಿಯಾದ ಘಟನೆ ನಗರ ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.
ಹಾಸನದ ಖಾಸಗಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅಕ್ಷತಾ (13) ಮೃತ ಬಾಲಕಿ.
ಕೂಲಿ ಕೆಲಸ ಮಾಡುವ ಅರಕಲಗೂಡು ತಾಲೂಕು ದೊಡ್ಡಮಗ್ಗೆ ಮೂಲದ ಅಪ್ಪಣ್ಣಶೆಟ್ಟಿ, ಪದ್ಮ ದಂಪತಿ ಪುತ್ರಿಯಾದ ಅಕ್ಷತಾ ಕಳೆದ ಬುಧವಾರದಿಂದ ಜ್ವರದಿಂದ ಬಳಲುತ್ತಿದ್ದಳು. ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದ ಅಕ್ಷತಾ ಪೋಷಕರು ಆಕೆ ಗುಣಮಖಳಾಗದಿದ್ದಾಗ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೂ ಆಕೆ ಚೇತರಿಸಿಕೊಳ್ಳದಿದ್ದಾಗ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆ ವೈದ್ಯರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಸಾಗುಹಾಕಿದ್ದರು.
ಆಗಲೇ ವಿಷಮ ಸ್ಥಿತಿ ತಲುಪಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ. ಬಾಲಕಿ ಸಾವಿನಿಂದ ಬಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.