ವಿಡಿಯೋ: ಅಪರೂಪದ ಕ್ಷಣ-ಬೇಲೂರು ಚನ್ನಕೇಶವನ ಸ್ಪರ್ಶಿಸಿದ ಸೂರ್ಯಕಿರಣ

ಹಾಸನ, ಏ. 21:ಬೇಲೂರು ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ನಾಲ್ಕು ವರ್ಷಗಳ ನಂತರ ಅಪರೂಪದ ಕ್ಷಣ ಸೃಷ್ಟಿಯಾಗಿದೆ. ಪ್ರತಿ ವರ್ಷ ಏಪ್ರಿಲ್ 21-22ರಂದು ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹವನ್ನು ಸ್ಪರ್ಶಿಸುವ ದೃಶ್ಯಕ್ಕಾಗಿ ಕಾಯುವ ಭಕ್ತರಿಗೆ ಈ ಬಾರಿ ಸಾರ್ಥಕ್ಯದ ಕ್ಷಣ ದೊರೆತಿದೆ.

ಕಳೆದ ನಾಲ್ಕು ವರ್ಷಗಳಿಂದ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಸೂರ್ಯನ ರಶ್ಮಿ ವಿಗ್ರಹವನ್ನು ಸ್ಪರ್ಶಿಸದೇ ಭಕ್ತರಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈ ವರ್ಷ ಅಡೆತಡೆಗಳು ನಿವಾರಣೆಯಾಗಿ, ಇಂದು ಬೆಳಿಗ್ಗೆ 6:10ಕ್ಕೆ ದೇವಾಲಯದ ಗೋಪುರವನ್ನು ಮತ್ತು 6:15ಕ್ಕೆ ಶ್ರೀ ಚನ್ನಕೇಶವಸ್ವಾಮಿ ವಿಗ್ರಹವನ್ನು ಸೂರ್ಯನ ರಶ್ಮಿ ಸ್ಪರ್ಶಿಸಿತು. ಈ ಅಪರೂಪದ ದೃಶ್ಯವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.

ಬೆಳಿಗ್ಗೆ 9 ಗಂಟೆಯ ನಂತರ ಅರ್ಚಕರು ಶ್ರೀ ಚನ್ನಕೇಶವಸ್ವಾಮಿಯ ಪಾದವನ್ನು ಹಾಲಿನಿಂದ ತೊಳೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಾದು ಕಾದು ಬೇಸರಗೊಂಡು ಹಿಂದಿರುಗುತ್ತಿದ್ದ ಭಕ್ತರಿಗೆ ಈ ಬಾರಿಯ ದೃಶ್ಯ ಆನಂದದ ಕ್ಷಣವನ್ನು ಒದಗಿಸಿದೆ. ಈ ಐತಿಹಾಸಿಕ ಕ್ಷಣವು ಭಕ್ತರ ಜೊತೆಗೆ ಸ್ಥಳೀಯರಲ್ಲೂ ಹೆಮ್ಮೆಯ ಭಾವನೆ ಮೂಡಿಸಿದೆ.