ಹಾಸನ, ಮೇ 08: ಬೇಲೂರು ತಾಲೂಕಿನ ಗಂಗೂರು ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಅರ್ಚಕರೊಬ್ಬರು ದೇವಾಲಯದಲ್ಲೇ ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ರಂಗಸ್ವಾಮಿ (65) ಮೃತ ಅರ್ಚಕ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ರಂಗಸ್ವಾಮಿ ದೀರ್ಘಕಾಲದಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅವರು ಸರಿಯಾಗಿ ಪೂಜೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೆಲವು ಗ್ರಾಮಸ್ಥರು ತಹಸೀಲ್ದಾರ್ಗೆ ದೂರು ನೀಡಿದ್ದರು.
ಬೇರೆ ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿದ್ದರು. ಈ ವಿಚಾರದಲ್ಲಿ ರಂಗಸ್ವಾಮಿ ಮತ್ತು ಗ್ರಾಮಸ್ಥರ ನಡುವೆ ತಿಕ್ಕಾಟ ನಡೆದಿತ್ತು. ಇದರಿಂದ ಮನನೊಂದ ರಂಗಸ್ವಾಮಿ ದೇವಾಲಯದೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಹಳೇಬೀಡು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.